ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ 13 ವರ್ಷದ ಬಾಲಕನೊಬ್ಬ ಆಟವಾಡುವಾಗ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡು ತಗುಲಿದ ಪರಿಣಾಮ ಮಗುವಿನ ಹೊಟ್ಟೆ ಛಿದ್ರವಾಗಿದ್ದು ಪ್ರಾಣಬಿಟ್ಟಿದೆ.
ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ.
ಕಳ್ಳ ಪೊಲೀಸ್ ಆಟ ಆಡೋಣ ಎಂದು ಶೂಟ್ ಮಾಡಿದ ಬಾಲಕ
ಕೋಳಿ ಫಾರಂನಲ್ಲಿ ಭದ್ರತೆಗಾಗಿ ಒಂದು ಅಸಲಿ ಗನ್ ಇಡಲಾಗಿತ್ತು.
ಅದು ಸಜೀವ ಗುಂಡುಗಳಿಂದ ಲೋಡೆಡ್ ಆಗಿತ್ತು. ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕ ದಂಪತಿ ಇಲ್ಲೇ ಕೂಲಿ ಕಾರ್ಮಿಕರಾಗಿದ್ದು, 13 ವರ್ಷದ ಬಾಲಕ ಸುದೀಪ್ ದಾಸ್ನೊಂದಿಗೆ 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಕೆಲಸಕ್ಕೆ ಹೋಗಿದ್ದರು.
ಈ ವೇಳೆ ಬಾಲಕ ಸುದೀಪ್, ಮೇಲೆ ಇದ್ದ ಗನ್ ತೆಗೆದುಕೊಂಡು ಕಳ್ಳ-ಪೊಲೀಸ್ ಆಟ ಆಡೋಣ ಎನ್ನುತ್ತಾ 3 ವರ್ಷದ ಮಗುವಿನ ಮೇಲೆ ಶೂಟ್ ಮಾಡಿದ್ದಾನೆ.
ಈ ಆಕಸ್ಮಿಕ ಫೈರಿಂಗ್ ಮಗುವಿನ ಹೊಟ್ಟೆ ಸೀಳಿದೆ. ಅಲ್ಲೇ ಅಭಿಷೇಕ್ ತಾಯಿ ಲಿಪಿಕಾ ಇದ್ದು ಅವರಿಗೂ ಗಾಯವಾಗಿದೆ.
ಆಕಸ್ಮಿಕ ಫೈರಿಂಗ್ನಿಂದ ಮಗು ಸಾವನಪ್ಪಿದ ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.