ಉಪ್ಪಿನಂಗಡಿ: ಎರಡೂವರೆ ವರ್ಷದ ಗಂಡು ಮಗುವೊಂದು ಆಹಾರ ಸಿಕ್ಕಿಕೊಂಡು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ನಡೆದಿದೆ.
ಮೃತ ಮಗುವನ್ನು ಕಡಬದ ಲೆಂಡೋರಾಜ್ ಎಂಬವರಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ಉತ್ತರಪ್ರದೇಶ ನಿವಾಸಿ ದಿವ್ಯಾಂಶಿ ಸಿಂಗ್ ಮತ್ತು ರಾಜ್ ಸಿಂಗ್ ದಂಪತಿಗಳ ಮಗ ರುದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
ಮೃತರ ತಾಯಿ ದಿವ್ಯಾಂಶಿ ಸಿಂಗ್ ಎಂಬವರು ಉತ್ತರ ಪ್ರದೇಶ ಮೂಲದವರಾಗಿದ್ದು, ಕಡಬ ತಾಲೂಕು ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಲಿಂಡೋರಾಜ್ರವರ ಜಾಗದಲ್ಲಿ ಆಕೆಯ ಗಂಡನ ಜೊತೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಈ ದಿನ ಹಗಲು 11.00 ಗಂಟೆಯ ವೇಳೆಗೆ ಮಗುವಿಗೆ ಊಟ ಕೊಟ್ಟು ಬಳಿಕ ಮಗುವಿಗೆ ನಿದ್ದೆ ಬಂದ ಕಾರಣ ಮಗುವನ್ನು ಮಲಗಿಸಿದ್ದರು.
ಬಳಿಕ ಮಧ್ಯಾಹ್ನ 1.00 ಗಂಟೆಗೆ ಹೋಗಿ ಮಗುವನ್ನು ಎಬ್ಬಿಸಿದಾಗ ಮಗು ಏಳದೇ ಇದ್ದು ಪುನಃ ಪುನಃ ಎಬ್ಬಿಸಿದರೂ ಏಳದೇ ಇದ್ದುದರಿಂದ ಅವರು ಮಾಲಕ ಲಿಂಡೋರಾಜ್ರವರಿಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿದ್ದು, ಲಿಂಡೋರಾಜ್ ಅವರ ಕಾರಿನಲ್ಲಿ ಮಗುವನ್ನು ಕಡಬ ಜೆ.ಎಂ.ಜೆ ಆಸ್ಪತ್ರೆಗೆ ಮಧ್ಯಾಹ್ನ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿ ಅಲ್ಲಿಂದ ಕಡಬ ಆಸ್ಪತ್ರೆಗೆ ಕೊಂಡು ಹೋಗುವಂತೆ ತಿಳಿಸಿರುತ್ತಾರೆ.
ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮಗು ರುದ್ರ ಪ್ರತಾಪ್ ಸಿಂಗ್ ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಖಾಯಿಲೆಯು ಉಲ್ಬಣಗೊಂಡು ಮೃತಪಟ್ಟಿರುವುದಾಗಿದೆ ಅಲ್ಲದೇ ಈ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಮುಂದಿನ ಅಂತ್ಯ ಕ್ರಿಯೆಯ ಬಗ್ಗೆ ಬಿಟ್ಟುಕೊಡಬೇಕಾಗಿ ಮೃತರ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 20/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.