ಹಾಸನ: ಓವರ್ಟೇಕ್ ಮಾಡುವಾಗ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಹಾಸನ ತಾಲೂಕಿನ ಕಾರೇಕೆರೆ ಗ್ರಾಮದ ಕೃಷಿ ಕಾಲೇಜು ಎದುರು ನಡೆದಿದೆ.
ಹಾಸನ ನಗರದ ಕೆ.ಹೊಸಕೊಪ್ಪಲು ಬಡಾವಣೆ ನಿವಾಸಿ ಶಾಂತಮ್ಮ (45) ಮೃತ ದುರ್ದೈವಿ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಆಲ್ಟೋ ಹಾಗೂ ವ್ಯಾಗನರ್ ಕಾರುಗಳು ಕಾರೇಕೆರೆ ಬಳಿ ಫ್ಲೈಓವರ್ ಬಳಿ ಓವರ್ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಎರಡೂ ಕಾರುಗಳು ಪಲ್ಟಿಯಾಗಿವೆ.
ವ್ಯಾಗನರ್ ಕಾರಿನಲ್ಲಿದ್ದ ಪತಿ ಹಾಗೂ ಗರ್ಭಿಣಿ ಪತ್ನಿ ಅಪಘಾತದ ನಂತರ ಬೇರೆ ಕಾರಿನಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಟೋ ಕಾರಿನಲ್ಲಿದ್ದ ಕೆ.ಹೊಸಕೊಪ್ಪಲು ಬಡಾವಣೆಯ ನಾಗೇಶ, ಯುಕ್ತಿ, ಗೌರಮ್ಮ, ಶಾಂತಮ್ಮರ ಪೈಕಿ ಶಾಂತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ವರ್ಷದ ಯುಕ್ತಿ ಎಂಬ ಮಗುವಿಗೆ ಗಾಯಗಳಾಗಿವೆ.
ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.