ನವದೆಹಲಿ: 2026ರ ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಶೀಘ್ರದಲ್ಲೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆ.ಅಣ್ಣಾಮಲೈ ಅವರ ಬದಲಾವಣೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೆ.ಅಣ್ಣಾಮಲೈ ನಡುವೆ ಮಹತ್ವದ ಮಾತುಕತೆ ನಡೆದಿದೆ.
ಅಣ್ಣಾಮಲೈ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಮಿತ್ ಶಾ ಅವರು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಡುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಇಳಿಯೋ ಸಾಧ್ಯತೆ ಇದೆ. ಈ ದಿಢೀರ್ ಬೆಳವಣಿಗೆಗೆ ಕಾರಣ ಬಿಜೆಪಿ, AIDMK ಮರು ಮೈತ್ರಿಯ ಲೆಕ್ಕಾಚಾರ ಎನ್ನಲಾಗಿದೆ.
ಇತ್ತೀಚೆಗೆ ಬಿಜೆಪಿ ಹೈಕಮಾಂಡ್ ನಾಯಕರನ್ನು AIDMK ನಾಯಕ, ಮಾಜಿ ಸಿಎಂ ಪಳನಿಸ್ವಾಮಿ ಅವರು ಭೇಟಿಯಾಗಿದ್ದರು. ಈ ವೇಳೆ ಪಳನಿಸ್ವಾಮಿ ಅವರು ತಮಿಳುನಾಡಿನಲ್ಲಿ AIDMK ಮತ್ತು ಬಿಜೆಪಿ ಮೈತ್ರಿಯಾಗಬೇಕಂದ್ರೆ ಅಣ್ಣಾಮಲೈ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯಬೇಕು. ಇಲ್ಲವಾದರೆ ಮೈತ್ರಿ ಸಾಧ್ಯವಿಲ್ಲ ಎಂದಿದ್ದರು.
ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ತಮಿಳುನಾಡಿನಲ್ಲಿ ಮೈತ್ರಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಣ್ಣಾಮಲೈಗೆ ಕೊಕ್ ನೀಡುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಣ್ಣಾಮಲೈಗೆ ಬೇರೆ ರಾಜ್ಯದ ಉಸ್ತುವಾರಿಯಾಗುವ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
2023ರಲ್ಲಿ AIDMK ಮತ್ತು ಬಿಜೆಪಿಯ ನಡುವಿನ ಮೈತ್ರಿ ಅಂತ್ಯವಾಗಿತ್ತು. 2026ಕ್ಕೆ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ಮತ್ತೆ ಮೈತ್ರಿಯ ಲೆಕ್ಕಾಚಾರ ಜೋರಾಗಿದೆ. ಈ ಮೈತ್ರಿಯ ತಂತ್ರಗಾರಿಕೆಯಲ್ಲಿ ಮೊದಲಿಗೆ ಅಣ್ಣಾಮಲೈ ಅವರಿಗೆ ಬಿಗ್ ಶಾಕ್ ನೀಡಲಾಗುತ್ತಿದೆ.