ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಅಣ್ಣಮಲೈ ಅವರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಕೆ.ಅಣ್ಣಮಲೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎರಡು ದಿನಗಳ ಹಿಂದೆಯೇ ಕೆ.ಅಣ್ಣಮಲೈ ಅವರು ಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ರಾಜಕೀಯ ಮೂಲಗಳು ಹೇಳಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಣ್ಣಾಮಲೈ ಅವರಿಗೆ ಬಿಜೆಪಿ ನಿರ್ಧಾರವನ್ನು ತಿಳಿಸಲಾಗಿದೆ. ಅದರಂತೆ ಈಗ ಕೆ.ಅಣ್ಣಮಲೈ ಅವರು ಸ್ಥಾನದಿಂದ ಕೆಳಗಿಳಿದ್ದಾರೆ.
ರಾಜೀನಾಮೆ ಬಳಿಕ ಮಾತನಾಡಿದ ಕೆ.ಅಣ್ಣಮಲೈ ಅವರು, ಈಗ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನಾನಲ್ಲ. ಆದರೆ ತಮಿಳುನಾಡಿನಲ್ಲಿ ಜೀವ ಕೊಟ್ಟು ಬಿಜೆಪಿ ಪಕ್ಷವನ್ನು ಬೆಳೆಸಿದ್ದೇನೆ. ಮುಂದಿನ ನೂತನ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಯಾರನ್ನೂ ಸೂಚಿಸಿಲ್ಲ. ಈ ಮಣ್ಣನ್ನ ಬಿಟ್ಟು ನಾನು ಎಲ್ಲಿಗೂ ಹೋಗಲ್ಲ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರ ರೇಸ್ನಲ್ಲಿ ನಾನು ಇಲ್ಲ. ಈ ಪಕ್ಷ ಚೆನ್ನಾಗಿರಬೇಕು. ಏಕೆಂದರೆ ಈ ಪಕ್ಷದಲ್ಲಿ ಎಲ್ಲ ಒಳ್ಳೆಯವರೇ ಇದ್ದಾರೆ. ಈ ಪಕ್ಷಕ್ಕಾಗಿ ಸಾಕಷ್ಟು ಜನ ಉಸಿರು ಕೊಟ್ಟಿದ್ದಾರೆ. ಬಿಜೆಪಿ ನೂತನ ಅಧ್ಯಕ್ಷರನ್ನ ಆಯ್ಕೆ ಮಾಡುವಾಗ ಇನ್ನಷ್ಟು ಮಾತನಾಡುತ್ತೇನೆ ಎಂದು ಅಣ್ಣಮಲೈ ಅವರು ಹೇಳಿದ್ದಾರೆ.



























