ಪುತ್ತೂರು: ಏಳನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಬಡವರ ಆಹಾರವಾಗಿದ್ದ ಹಲಸು ಇಂದು ಬಹಳ ಮಹತ್ವ ಪಡೆದುಕೊಂಡಿದೆ. ಮಾವಿಗಾದರೂ ಹೂವು ಬಿಡುವಾಗಲೇ ಸ್ಪ್ರೇ ಮಾಡಬೇಕಾಗುತ್ತದೆ. ಆದರೆ ಹಲಸಿಗೆ ರಾಸಾಯನಿಕ ಸಿಂಪಡಿಸುವ ಅಗತ್ಯವೇ ಇಲ್ಲ. ಹಾಗಾಗಿ ಪ್ರಕೃತಿದತ್ತವಾಗಿ ಸಿಗುವ ಈ ಸಾವಯವ ಹಲಸಿನ ಮೇಳ ಜಿಲ್ಲಾ ಮಟ್ಟದಲ್ಲಿಯೂ ಆಗಬೇಕಾಗಿದೆ. ಮುಂದಿನ ವರ್ಷ ಪುತ್ತೂರು ದೇವಸ್ಥಾನದ ಗದ್ದೆಯಲ್ಲಿ ಆಯೋಜನೆಯಾಗುವಂತಾಗಲಿ. ಇದಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬನ್ನೂರು ರೈತರ ಸೇವಾ ಸಹಕಾರಿ ಸಂಘವೂ ಕೈಜೋಡಿಸಲಿದೆ ಎಂದು ಭರವಸೆ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ನಡೆಯುತ್ತದೆ. ಈ ಸಂದರ್ಭ ಹಲಸು ಬೇಕೇ ಬೇಕು. ಹಾಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೂ ಪ್ರಿಯವಾಗಿರುವ ಹಲಸಿನ ಹಣ್ಣಿನ ಹಬ್ಬ ಇನ್ನಷ್ಟು ವೈಭವದಿಂದ ನಡೆಯುವಂತಾಗಲಿ. ಇದರಲ್ಲಿ ದೊಡ್ಡ ಹಲಸು ಹಾಗೂ ಸಣ್ಣ ಹಲಸು ತರುವವರಿಗೂ ಬಹುಮಾನ ನೀಡುವಂತಾದರೆ ಇನ್ನೂ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಿಸಿದರು.
ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಮಾತನಾಡಿ, ಬಡವರ ಆಹಾರವಾಗಿದ್ದ ಹಲಸು ಇಂದು ಪ್ರಾಧಾನ್ಯತೆ ಪಡೆಯುತ್ತಿದೆ. ಮುಂದೆ ಇದರ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಗೆ ಬರುವಂತಾಗಲಿ ಎಂದು ಹಾರೈಸಿದರು.
ಮಹಾದೇವ ಶಾಸ್ತ್ರಿ ಮಾತನಾಡಿ, ಕಾಸರಗೋಡಿನ ಹಿರಿಯರೊಬ್ಬರನ್ನು ಕೆಲ ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಅವರ ಬಳಿ ಮಾತನಾಡುವಾಗ, ಕಾಂಪೌಂಡಿಗೆ ಹಾಗೂ ಮನೆಗೆ ತೊಂದರೆಯಾಗದಂತೆ ಹಲಸು ಬೆಳೆಸುವ ಪದ್ಧತಿಯನ್ನು ಹೇಳಿಕೊಟ್ಟರು. ಹಲಸಿಗೆ ಬೆನ್ನು ಹಾಗೂ ಮುಖ ಇರುತ್ತದೆ. ಇದನ್ನು ಗಮನಿಸಿಕೊಂಡು ಕ್ರಮವಾಗಿ ಹಲಸನ್ನು ನೆಟ್ಟರೆ, ಮನೆಗೆ ಅಥವಾ ಕಾಂಪೌಂಡಿಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಹಲಸಿನ ಇಂತಹ ವೈವಿಧ್ಯತೆಗಳ ಬಗ್ಗೆಯೂ ಬೆಳಕು ಚೆಲ್ಲುವ ಕಾಯಕ ಈ ಕಾರ್ಯಕ್ರಮದಿಂದಾಗಲಿ ಎಂದರು.
ನವನೀತ್ ನರ್ಸರಿಯ ವೇಣುಗೋಪಾಲ್ ಎಸ್.ಜೆ. ಮಾತನಾಡಿ, ನಮ್ಮದು ಕೃಷಿ ಹಿನ್ನೆಲೆ. ಹಾಗಾಗಿ ಅಭಿವೃದ್ಧಿ ಆಗಬೇಕಾದರೆ ಕೃಷಿಯಿಂದಲೇ ಅಭಿವೃದ್ಧಿ ಶುರು ಆಗಬೇಕು. ಇದರ ಮೇಲೆ ಆರ್ಥಿಕತೆ ಹಾಗೂ ಮಾರುಕಟ್ಟೆ ಸೃಷ್ಟಿ ಆಗಬೇಕಿದೆ. ಒಟ್ಟಿನಲ್ಲಿ ಈ ಮೇಳದಿಂದ ಕೃಷಿಕರಿಗೆ ಹಾಗೂ ಕೃಷಿಗೆ ಉಪಯೋಗವಾಗುವಂತಾಗಲಿ ಎಂದರು.
ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷ ಕುಸುಮಾಧರ್, ವಕೀಲ ವಿರೂಪಾಕ್ಷ ಭಟ್ ಮೊದಲಾದವರು ಉಪಸ್ಥಿತರಿದ್ದರು.ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.