ಕಡಬ: ಮೈಸೂರಿನಿಂದ ಬಂದು ಹೋಟೆಲ್ ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಊರವರಿಗೆ ಲಕ್ಷಾಂತರ ರೂ.ವಂಚಿಸಿ ಪರಾರಿಯಾಗಿದ್ದಾನೆ.
ಕಡಬದ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದ ಮೈಸೂರಿನ ಶರತ್ ಬಾಬು ಎಂಬಾತ ಪಾಲುದಾರಿಕೆಯ ಹೆಸರಿನಲ್ಲಿ ಸ್ಥಳೀಯ ಜನರೊಂದಿಗೆ ಸ್ನೇಹ ಸಂಪಾದಿಸಿ ನಂತರ ಲಕ್ಷಾಂತರ ರೂ. ಹಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾನೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ.ಟಿ. ಕರೀಗೌಡ ಎಂಬವರ ಪುತ್ರ ಶರತ್ ಬಾಬು ಸಿ.ಕೆ. ಎಂಬಾತ ಕಡಬದಲ್ಲಿ ನೂತನವಾಗಿ ಆರಂಭವಾದ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರನಾಗಿ ಸೇರಿಕೊಂಡು ಮಾಲಕರ ಸ್ನೇಹ ಸಂಪಾದಿಸಿ ಮ್ಯಾನೇಜ್ಮೆಂಟ್ ವರೆಗೂ ಮಾಡಿಕೊಂಡಿದ್ದ.

ಈ ನಡುವೆ ಸ್ಥಳೀಯವಾಗಿ ಉನ್ನತ ಸ್ಥಾನದಲ್ಲಿ ಇರುವ ಹಲವಾರು ಜನರನ್ನು ತನ್ನ ಮಾತಿನ ಮೋಡಿ ಮೂಲಕ ವಂಚಿಸಿ ಹಣ, ಚಿನ್ನಾಭರಣಗಳು, ವಾಹನ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹತ್ತು ಲಕ್ಷಕ್ಕೂ ಮಿಕ್ಕಿದ ವಸ್ತುಗಳೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.