ಬೆಂಗಳೂರು: ಕೋರ್ಟ್ ಆವರಣದಲ್ಲಿ ನಡೆದ ವಕೀಲರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಗದೀಶ್ ಅವರನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಕೀಲ ಜಗದೀಶ್ ಅವರು ಕೋರ್ಟ್ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಹೊರಗಡೆಯಿಂದ ಜನರನ್ನು ಕರೆತಂದು ಗೂಂಡಾವರ್ತನೆ ಮಾಡಿದ್ದಾರೆಂದು ಆರೋಪಿಸಿ ಶನಿವಾರ ವಕೀಲರ ಸಂಘದ ವಿವೇಕ್ ರೆಡ್ಡಿ ಅವರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಭಾನುವಾರ ಸಂಜೆ ಒಳಗೆ ಜಗದೀಶ್ ಅವರನ್ನು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಭ್ರಷ್ಟಾಚಾರ ಪ್ರಕರಣ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ಗೆ ಹೋದಂತ ಸಮಯದಲ್ಲಿ ನನ್ನ ಹಾಗೂ ನನ್ನ ಮಗನ ಮೇಲೆ ಕೆಲ ಗೂಂಡಾಗಳು ಹಲ್ಲೆ ಮಾಡಿದ್ದಾರೆಂದು ಜಗದೀಶ್ ಅವರು ಫೇಸ್ಬುಕ್ ಲೈವ್ನಲ್ಲಿ ಆರೋಪ ಮಾಡಿದ್ದರು.
ಮಗನನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಲಾಗಿದೆ. ಏನಾದರೂ ಆದರೆ, ನಾನು ಯಾರನ್ನು ಬಿಡುವುದಿಲ್ಲ ಎಂದು ಜಗದೀಶ್ ಅವರು ಕೂಗಾಡಿದ್ದರು. ಅಲ್ಲದೆ, ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಐಜಿಪಿ ಪ್ರವೀಣ್ ಸೂದ್ ವಿರುದ್ಧವೂ ಕೂಗಾಡಿದ್ದರು