ಬೆಂಗಳೂರು: ಸಮಾಜದ ಸ್ವಾಸ್ಥ್ಯ, ಶಾಂತಿ ಭಂಗಕ್ಕೆ ಯತ್ನದಂತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸ್ ದಾಳಿ ನಡೆದಿದೆ.
ಒಟ್ಟು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇವರ ವಿರುದ್ಧ ಪ್ರಥಮ ವರ್ತಮಾನ ವರದಿ ಬದಲು ಮುಂಜಾಗ್ರತಾ ಕ್ರಮದ ವರದಿ ಹಾಕಲಾಗುತ್ತದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (CrPC) ಕಲಂ 107, 108, 109 ಮತ್ತು 151ರ ಅಡಿ ಬರುವ ಅಡಿ ಭದ್ರತಾ ಕೇಸ್ಗಳು ಹಾಗೂ ಮುಂಜಾಗೃತ ಕೇಸ್ಗಳ ಮೇಲೆ ಪಿಎಆರ್ ದಾಖಲಿಸಲಾಗುತ್ತದೆ.
ಪಿಎಆರ್ ದಾಖಲಾದ ಬಳಿಕ ವಶಕ್ಕೆ ಪಡೆದ ವ್ಯಕ್ತಿಯ ಯಾವ ಕೃತ್ಯದಿಂದ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಹೇಳಿಕೆ ಪಡೆಯಬೇಕಾಗುತ್ತದೆ. ವಶಕ್ಕೆ ಪಡೆದ ವ್ಯಕ್ತಿಗಳ ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಲಾಗುತ್ತದೆ. ಆ ಮಾಹಿತಿ ಆಧರಿಸಿ ದಂಡಾಧಿಕಾರಿಗಳು, ಆತನಿಂದ ಮುಚ್ಚಳಿಕೆ ಪಡೆಯುತ್ತಾರೆ.
ಶ್ಯೂರಿಟಿ ನೀಡದಿದ್ದರೆ ಜೈಲು..!!??
ವಶಕ್ಕೆ ಪಡೆದಿರುವ ವ್ಯಕ್ತಿಗಳನ್ನು ಆಯಾ ವ್ಯಾಪ್ತಿಯ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗುತ್ತದೆ. ಸೂಕ್ತ ರೀತಿಯಲ್ಲಿ ಬಾಂಡ್ ಶ್ಯೂರಿಟಿ ಕೊಟ್ಟರಷ್ಟೇ ಬಿಡುಗಡೆ ಮಾಡಲಾಗುತ್ತದೆ. ಶ್ಯೂರಿಟಿ ನೀಡದೇ ಇದ್ದರೆ ಜೈಲಿಗೆ ಕಳುಹಿಸಲಾಗುತ್ತದೆ.
ಸಮಾಜದ ಸ್ವಾಸ್ಥ್ಯ, ಶಾಂತಿ ಭಂಗಕ್ಕೆ ಯತ್ನ, ಚುನಾವಣೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಹುದು ಎಂಬ ಅನುಮಾನದ ಮೇಲೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಅಧಿಕಾರವಿದೆ.
