ಪುತ್ತೂರು : ವಿವೇಕಾನಂದ ಶಿಶುಮಂದಿರದಲ್ಲಿ ಪಾಲಕರ ಸಭೆ ಹಾಗೂ ಮಕ್ಕಳ ಪ್ರವೇಶೋತ್ಸವ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಮೈತ್ರೇಯಿ ಗುರುಕುಲದ ಸಾವಿತ್ರಿ ಆಗಮಿಸಿ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶಿಶುಮಂದಿರದ ಪುಟಾಣಿಗಳು ದೀಪ ಮಂತ್ರ ಹಾಗೂ ಪ್ರಾರ್ಥನೆಯ ಮೂಲಕ ವಂದಿಸಿದರು.

ಗರ್ಭಾವಸ್ಥೆಯಿಂದ ಆರು ವರ್ಷದವರೆಗಿನ ಮಗುವನ್ನು ಶಿಶು ಎಂದು ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿ, ಮಗು ದೇವರಿಗೆ ಸಮಾನ, ಮಗು ವಿಜ್ಞಾನಿ, ಮಗು ಆನಂದವನ್ನು ಕೊಡುತ್ತದೆ, ಒಟ್ಟಿನಲ್ಲಿ ಮಗುವಿನ ಮನಸ್ಸು ನಿಷ್ಕಲ್ಮಶ ಎಂದು ಪಾಲಕರಿಗೆ ವಿವರಿಸಿದರು.
ಮಗು ತಳ್ಳುವ ಗಾಡಿಯಂತೆ, ಮಗು ಕೋತಿ ಮರಿ, ಗಾಳಿಪಟ, ಬಲೂನು, ಗಾಜಿನ ಜರಡಿ ಇದ್ದಂತೆ, ಮಕ್ಕಳು ಹೀಗೆ ಇರಲಿ ಅವರನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಬಾರದು. ಮಗುವನ್ನು ನಮ್ಮ ವೇಗದಲ್ಲಿ ಕರೆದುಕೊಂಡು ಹೋಗದೆ, ಮಗುವಿನ ವೇಗದಲ್ಲಿ ನಾವು ನಡೆಯಬೇಕು ಎಂಬ ಉತ್ತಮ ಸಂದೇಶವನ್ನು ನೀಡಿದರು.

ಮಗುವು ಪ್ರಾಶ್ನಿಕ ಬುದ್ಧಿ, ಪುನರಾವರ್ತನೆ, ಕುತೂಹಲ, ಅವಲೋಕನವನ್ನು ಮಾಡುವುದು. ಪ್ರೀತಿ ,ಕಾಳಜಿ ,ರಕ್ಷಣೆಯನ್ನು ಮಗು ಬಯಸುವುದು ಇದನ್ನು ಮಗುವಿಗೆ ನಾವು ಕೊಡಲೇಬೇಕು. ಮಗುವಿನ ಸಮಗ್ರ ವಿಕಾಸವು ಶಿಶುಮಂದಿರದಿಂದ ಮಾತ್ರ ಸಾಧ್ಯ ಎಂದು ಪಾಲಕರಿಗೆ ಮನಮುಟ್ಟುವಂತೆ ತಿಳಿಸಿದರು.
ಮಕ್ಕಳಿಗೆ ಆರತಿ ಬೆಳಗಿ ತಿಲಕವಿಟ್ಟು ಅಕ್ಷತೆಯನ್ನು ಹಾಕಿ ಮಕ್ಕಳ ಪ್ರವೇಶೋತ್ಸವವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಿಶುಮಂದಿರದ ಸದಸ್ಯರಾದ ಮಲ್ಲೇಶ್, ಅಶೋಕ್ ಬಲ್ನಾಡು ಹಾಗೂ ಸಂಚಾಲಕರಾದ ಅಕ್ಷಯ್ ಕುಮಾರ್, ಮಾತಾಜಿಯವರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಿಶುಮಂದಿರದ ಅಧ್ಯಕ್ಷರಾದ ರಾಜಗೋಪಾಲ್ ಭಟ್ ಅತಿಥಿಗಳ ಸ್ವಾಗತ ಮತ್ತು ಪ್ರಸ್ತಾವನೆಯನ್ನು ಮಾಡಿದರು. ಕೋಶಾಧಿಕಾರಿ ಚಂದ್ರಪ್ರಭಾ ಧನ್ಯವಾದವನ್ನು ಸಮರ್ಪಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು.


























