ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸಮಿತಿಯ ಪದಾಧಿಕಾರಿಗಳ ನೂತನ ಆಯ್ಕೆ ಮತ್ತು ಪೂರ್ವ ಸಿದ್ಧತಾ ಸಭೆಯು ಜು.2 ರಂದು ಆದರ್ಶ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.
ಸಮಿತಿ ಗೌರವ ಅಧ್ಯಕ್ಷರಾಗಿ ಡಾ.ಎಂ ಕೆ ಪ್ರಸಾದ್, ಅಧ್ಯಕ್ಷರಾಗಿ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಅಶೋಕ್ ಕುಂಬ್ಳೆ, ಖಜಾಂಜಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ನೀಲಂತ್, ಉಪಾಧ್ಯಕ್ಷರುಗಳಾಗಿ ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು, ರವೀಂದ್ರ ರೈ ನುಳಿಯಾಲು, ಸುಧೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಆರುವಾರ, ರಮೇಶ್ ಮುಂಡೂರು ಮತ್ತು ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾಗಿ ಸಂತೋಷ್ ರೈ ಕೈಕಾರ, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ರಾಜೇಶ್ ಬನ್ನೂರು, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗೆ ಸಂಚಾಲಕರಾಗಿ ಸುರೇಂದ್ರ ಆಚಾರ್ಯ, ಅಜಿತ್ ರೈ ಹೊಸಮನೆ, ಆಹಾರ ಸಮಿತಿ ಸಂಚಾಲಕರಾಗಿ ಕಿರಣ್ ಶಂಕರ್ ಮಲ್ಯ, ಆನಂದ ನೆಕ್ಕರೆ, ಸ್ವಾಗತ ಸಮಿತಿ ಸಂಚಾಲಕರಾಗಿ ಚಂದ್ರಶೇಖರ್ ಎಸ್, ಉದಯ ಹೆಚ್ ಅವರನ್ನು ಆಯ್ಕೆ ಮಾಡಲಾಯಿತು.
ಗಣೇಶೋತ್ಸವ ಸಮಿತಿಯಿಂದ ಪುತ್ತಿಲ ಪರಿವಾರ ಹೊರಕ್ಕೆ..!!!
ಕಳೆದ ಐವತ್ತಾರು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸುಮಾರು ಹದಿನೈದು ವರ್ಷಗಳಿಂದ ಶಶಾಂಕ್ ಕೊಟೇಚಾ, ಹತ್ತು ವರ್ಷಗಳಿಂದ ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಅವರು ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ವರ್ಷದ ಕಾರ್ಯಕ್ರಮ ಮುಗಿದ ಬಳಿಕ ಸಮಿತಿ ಬದಲಾವಣೆಯ ಚರ್ಚೆ ನಡೆಯುತ್ತಿತ್ತು. ಆದಾದ ಬಳಿಕ ಪ್ರಮುಖರು ಸೇರಿಕೊಂಡು ಡಾ. ಸುರೇಶ್ ಪುತ್ತೂರಾಯ ಅವರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು ಎನ್ನಲಾಗಿದೆಯಾದರೂ ಅದು
ಅಧಿಕೃತವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಈ ಸಂದರ್ಭದಲ್ಲಿ ಪುತ್ತಿಲ ಪರ ಶಶಾಂಕ್ ಕೊಟೇಚಾ ಮತ್ತು ಡಾ. ಸುರೇಶ್ ಪುತ್ತೂರಾಯ, ಕೃಷ್ಣ ಪ್ರಸಾದ್ ಶೆಟ್ಟಿ ಅವರು ಬ್ಯಾಟ್ ಬೀಸಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನೂತನ ಸಮಿತಿಯನ್ನು ರಚನೆ ಮಾಡಲಾಗಿದೆ.
ಇಂದಿನ ಸಭೆಗೆ ಶಶಾಂಕ್ ಕೊಟೇಚಾ, ಅರುಣ್ ಕುಮಾರ್ ಪುತ್ತಿಲ
ಬಂದಿರಲಿಲ್ಲ. ಈ ಕುರಿತು ಅವರ ಬಳಿ ಮಾಹಿತಿ ಕೇಳಿದಾಗ ನಮ್ಮನ್ನು ಸಭೆಗೆ ಆಹ್ವಾನಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ 15 ವರುಷಕ್ಕೂ ಹೆಚ್ಚು ಕಾಲ ಶಶಾಂಕ್ ಕೊಟೇಚಾ ಹಾಗೂ ಕಾರ್ಯಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ರವರು 10 ವರುಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದರು.
ಪರ್ಯಾಯ ಗಣೇಶೋತ್ಸವ ಆಗುತ್ತಾ..!! ಸಿದ್ಧತೆ ನಡೆಸುತ್ತಿದ್ದಾರಾ..!??
ಈ ವರುಷ ಪುತ್ತೂರಿನಲ್ಲಿ ಪರ್ಯಾಯ ಗಣೇಶೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು, ಪುತ್ತಿಲ ಪರಿವಾರ ಈ ಬಾರಿ ಗಣೇಶೋತ್ಸವ ನಡೆಸುವ ಚಿಂತನೆ ನಡೆಸುತ್ತಿದ್ದೇಯ..!?? ಎಂಬ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಪ್ರತಿ ವರುಷವೂ ಅದ್ದೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಈ ಬಾರಿ ವಿಧಾನ ಸಭಾ ಚುನಾವಣೆಯ ರಾಜಕೀಯ ಬಿಸಿ ತಟ್ಟಿದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.


























