ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಹೊರ ಜಿಲ್ಲೆ ಹೊರ ರಾಜ್ಯದಿಂದ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಹೀಗೆ ಆಗಮಿಸುವ ಭಕ್ತರು ದೇವರಿಗೆ ಕೈ ಮುಗಿದು ದೇವಾಲಯದ ಎದುರು ಫೋಟೋ ಕ್ಲಿಕ್ಕಿಸಿ ಹೋಗೋದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ದೇವಾಲಯದ ಆವರಣಕ್ಕೂ ಕಾಲಿಟ್ಟಿರೋದ್ರಿಂದ ಮುಜುಗರದ ಸನ್ನಿವೇಶ ಎದುರಾಗಿದೆ. ಹೀಗಾಗಿ ಶ್ರೀಕೃಷ್ಣಮಠದ ಆಡಳಿತ ಒಂದು ಕಡಕ್ ನಿರ್ಧಾರ ಕೈಗೊಂಡಿದೆ.
ಫ್ರೀ ವೆಡ್ಡಿಂಗ್ ಶೂಟ್, ಇತ್ತೀಚೆಗೆ ಮದುವೆಗೂ ಮುಂಚೆ ಮಾಡುವ ಬಹುಮುಖ್ಯವಾದ ಕಾರ್ಯಕ್ರಮ. ಉಡುಪಿ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕಗೋಪುರ, ಅಷ್ಟಮಠಗಳ ಎದುರು, ಪವಿತ್ರ ರಥದ ಬಳಿ ಹೀಗೆ ರಥಬೀದಿ ಸುತ್ತಲೂ ಬೆಳ್ಳಂಬೆಳಗ್ಗೆ ಮದುವೆಯಾಗುವ ಜೋಡಿಗಳು ಹಾಜರಾಗ್ತಾರೆ. ಕೇವಲ ಹಾಜರಾಗೋದಷ್ಟೆ ಅಲ್ಲ ಕೈ ಕೈ ಹಿಡಿದು ಎತ್ತಿಕೊಂಡು ಮುದ್ದಾಡುವಷ್ಡರ ಮಟ್ಟಿಗೆ ಪ್ರೀವೆಡ್ಡಿಂಗ್ ಫೋಟೋಶೂಟ್ ಶುರುವಾಗಿದೆ.
ಪಾರ್ಕ್, ಬೀಚ್, ಬೆಟ್ಟ ಗುಡ್ಡ, ಫಾಲ್ಸ್ ಬಳಿಯ ಫೋಟೋ ಶೂಟ್ ಈಗ ಪವಿತ್ರ ಧಾರ್ಮಿಕ ಸ್ಥಳಕ್ಕೂ ಕಾಲಿಟ್ಟಿರೋದು ಧಾರ್ಮಿಕ ವಿದ್ವಾಂಸರು, ಅಷ್ಟ ಮಠಾಧೀಶರು, ಭಕ್ತರು, ಮಹಿಳೆಯರಿಗೆ ಮುಜುಗರಕ್ಕೀಡು ಮಾಡಿದೆ.
ಈಗ ರಥಬೀದಿ ಸುತ್ತಲೂ ಫೋಟೋ ಶೂಟ್ ಬ್ಯಾನ್ ಆಗಿದೆ. ಅಪರೂಪಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಈಗ ಫೋಟೋ ತೆಗೆಯಲಾಗದೆ ಮರಳುವಂತಾಗಿದೆ.
ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಇಂತಹದೊಂದು ಕಡಕ್ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಮಠಾಧೀಶರೆದುರೇ ಜೋಡಿಗಳು ಫೊಟೋಶೂಟ್ಗಾಗಿ ಅಸಭ್ಯ ವರ್ತನೆಯಲ್ಲಿ ಮೈಮರೆತಿರೋದು. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಯತಿಗಳೆದುರೇ ಅಸಭ್ಯ ವರ್ತನೆಗೆ ಯತಿಗಳು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಫೋಟೋಶೂಟ್ ನೆಪದಲ್ಲಿ ಪ್ರೇಮ ಸಲ್ಲಾಪ ನಡೆಸುವಂತೆ ಜೋಡಿಗಳಿಗೆ ಮಾರ್ಗದರ್ಶನ ನೀಡ್ತಿದ್ದಾರೆ.
ನೂರಾರು ವರ್ಷಗಳಿಂದ ಅಷ್ಟಮಠಾಧೀಶರು ಓಡಾಡುವ ಪವಿತ್ರ ಸ್ಥಳ, ರಥೋತ್ಸವ ನಡೆಯುವ ಪವಿತ್ರ ಹಾದಿ ರಥಬೀದಿ. ಇಂತಹ ಸ್ಥಳದಲ್ಲಿ ಜೋಡಿಗಳ ಸಲ್ಲಾಪ ಕ್ಷೇತ್ರದ ಪಾವಿತ್ರ್ಯತೆ ಕೆಡಿಸುತ್ತಿದೆ ಅಂತ ಮಠದ ವಿದ್ವಾಂಸರು ಬೇಸರ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ಶ್ರೀಗಳ ನಿರ್ಧಾರಕ್ಕೆ ಉಡುಪಿಯ ಪ್ರಜ್ಞಾವಂತ ನಾಗರಿಕರು ಸಮ್ಮತಿ ಸೂಚಿಸಿದ್ದಾರೆ. ಆದ್ರೆ ಯಾವ ಸ್ಥಳದಲ್ಲಿ ತಮ್ಮ ವರ್ತನೆ ಹೇಗಿರಬೇಕೆಂಬುದು ಮದುವೆ ಆಗುವ ಜೋಡಿಗಳೇ ಅರಿತುಕೊಳ್ಳಬೇಕಿದೆ.