ಪುತ್ತೂರು: ಚುನಾವಣೆಗೆ ಮೊದಲು ತನ್ನ ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಿವೇಶನಕ್ಕೆ ನೋಂದಣಿ ಮಾಡಿಸಿಕೊಂಡ ೨೫೦ ಮಂದಿ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನದ ಜೊತೆಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.
ವಿಟ್ಲ ಮುಡ್ನೂರು ಗ್ರಾಮದ ಕಟ್ಟತ್ತಿಲದಲ್ಲಿ ಮನೆ ನಿರ್ಮಾಣವಾಗಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಮನೆ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದು ಆ ಜಾಗದಲ್ಲೇ ಮನೆ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅತ್ಯುತ್ತಮ ಪ್ರದೇಶವಾಗಿ ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು.
ಯಾರಿಗೆಲ್ಲಾ ಮನೆ ದೊರೆಯಲಿದೆ:ಅಶೋಕ್ ರೈ ಅವರು ಶಾಸಕರಾಗುವ ಮೊದಲು ಅನೇಕ ಮಂದಿ ನಿವೇಶನ ಇಲ್ಲದವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅರ್ಹ 250 ಕುಟುಂಬಗಳನ್ನು ಮೊದಲ ಕಂತಿನಲ್ಲಿ ಆಯ್ಕೆ ಮಾಡಲಾಗುತ್ತದೆ. ನಿವೇಶನ ರಹಿತ ವಿಧವೆಯರು, ಪತಿ ಅನಾರೋಗ್ಯದಿಂದ ಇದ್ದು ಬಾಡಿಗೆ ಮನೆಯಲ್ಲಿ ವಾಸ ಮಾಡುವವರು, ಯಾವುದೇ ಆರ್ಥಿಕ ಶಕ್ತಿಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿ ಮನೆ ಬಾಡಿಗೆಯನ್ನು ನೀಡಲು ಅಶಕ್ತರಾದ ಕುಟುಂಬಗಳು, ಪೂರ್ಣವಾಗಿ ಅಶಕ್ತ ಕುಟುಂಬಗಳಿಗೆ ಈ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ. ಶಾಸಕ ಅಶೋಕ್ ರೈ ಅವರೇ ತಮ್ಮ ಸ್ವಂತ ಖರ್ಚಿನಿಂದ 250 ಮನೆಗಳನ್ನು ನಿರ್ಮಿಸಿ ಕೊಡಲಿದ್ದು , ನಿವೇಶನದ ಅಭಿವೃದ್ದಿ ಕಾಮಗಾರಿ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಮೂಲಭೂತ ಸೌಕರ್ಯ:ವಿಟ್ಲ ಮುಡ್ನೂರು ಗ್ರಾಮದ ಕಟ್ಟತ್ತಿಲದಲ್ಲಿರುವ ನಿವೇಶನಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಂದೇ ಕಡೆ ಒಂದೇ ರೀತಿಯ 250 ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ.
ನಾನು ಶಾಸಕನಾಗುವ ಮೊದಲು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅತಿ ಕಡುಬಡ ಕುಟುಂಬಗಳನ್ನು ನಮ್ಮ ಟ್ರಸ್ಟ್ ಮೂಲಕ ಆಯ್ಕೆ ಮಾಡಲಾಗಿದೆ. ವಿಧವೆಯರು, ಅನಾರೋಗ್ಯದಿಂದ ಇದ್ದವರು, ಅನೇಕ ವರ್ಷಗಳಿಂದ ಬಾಡಿಗೇ ಮನೆಯಲ್ಲೇ ಇದ್ದು ಬಾಡಿಗೆ ಕಟ್ಟಲು ಅಸಾಧ್ಯವಾಗಿರುವ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಮೊದಲಿಗೆ 160 ರಿಂದ 240 ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಆ ಕಾಲನಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಎಲ್ಲೋ ಗುಡ್ಡದಲ್ಲಿ ಮನೆ ಕಟ್ಟಿ ಅಲ್ಲಿ ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ಮನೆಯಲ್ಲಿ ವಾಸಕ್ತವ್ಯಕ್ಕೆ ಏನೆಲ್ಲಾ ಬೇಕೋ ಅದೆಲ್ಲವೂ ಆ ಜಾಗದಲ್ಲಿ ಸಿಗಲಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಸಹಿತ ಸರಕಾರವೇ ಆಗಮಿಸಲಿದೆ. ಅಶೋಕ್ ರೈ , ಶಾಸಕರು ಪುತ್ತೂರು
ಶಾಸಕರಾಗುವ ಮೊದಲೇ ಬಡವರಿಗೆ , ನಿರ್ಗತಿಕರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂಬುದು ಅಶೋಕ್ ರೈ ಅವರ ಕನಸಾಗಿತ್ತು. ಅಶೋಕ್ ರೈ ಅವರ ರೈಎಸ್ಟೇಟ್ಸ್ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅರ್ಜಿ ಸಲ್ಲಿಸಿದವರ ಪೈಕಿ ಫಲಾನುಭವಿಗಳ ಆಯ್ಕೆ ನಡೆದಿದೆ. ಶಾಸಕರಾದ ಬಳಿಕ ಬಡವರಿಗೆ ನಿವೇಶನದ ಜೊತೆಗೆ ಅದರಲ್ಲೇ ಮನೆ ನಿರ್ಮಾಣ ಮಾಡಿಕೊಡುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಶಾಸಕರ ಕನಸು ನನಸಾಗಿದ್ದು ನಮ್ಮೆಲ್ಲರ ಹೆಮ್ಮೆ, ಅಭಿಮಾನವಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ನಿವೇಶನ ರಹಿತರಿಗೆ ಶಾಸಕರ ಮೂಲಕ ನಿವೇಶನ ದೊರಕಲಿದ್ದು ಇದು ಬಡವರ ಪಾಲಿನ ಪುಣ್ಯ ಎಂದೇ ಹೇಳುತ್ತಿದ್ದೇನೆ.ಸುದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು, ರೈ ಚಾರಿಟೇಬಲ್ ಟ್ರಸ್ಟ್