ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಸುನೀಲ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ ನಂತರ, ಇಂದು ಪ್ರಥಮ ಬಾರಿಗೆ ಜಿಲ್ಲೆಗಾಗಮಿಸುವ ವೇಳೆ ಜನತೆಯಲ್ಲಿ ವಿನಂತಿಯೊಂದನ್ನು ಮಾಡಿದ್ದಾರೆ.
ವೈಯಕ್ತಿಕವಾಗಿ ಯಾರೂ ಹಾರ ತುರಾಯಿಗಳನ್ನು ತರಬಾರದು ಮತ್ತು ತಾನು ಅದನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಕೊಡಲೇಬೇಕು ಎಂದಿದ್ದರೆ ‘ಕನ್ನಡ ಪುಸ್ತಕ ಕೊಂಡು ತನ್ನಿ’ ಅದನ್ನು ಕಾರ್ಕಳದ ಸಾರ್ವಜನಿಕ ಗ್ರಂಥಾಲಯಕ್ಕೆ ಕೊಡುತ್ತೇನೆ. ಅಲ್ಲದೇ ಅಭಿನಂದನಾ ಸಮಾರಂಭ, ಸಂಭ್ರಮಾಚರಣೆಗಳಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಬಾರದು. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ತಿಳಿಸಿದ್ದಾರೆ.
ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ, ಅಪಾಯಕ್ಕೆ ಎಡೆ ಮಾಡಿ ಕೊಡುವುದು ಬೇಡ. ಪ್ರತಿಯೊಬ್ಬರೂ ಇದನ್ನು ಅರ್ಥೈಸಿಕೊಂಡು ವ್ಯವಸ್ಥೆಯೊಂದಿಗೆ ಸಹಕಾರ ನೀಡೋಣ. ಕೋವಿಡ್ನಿಂದ ದೂರವಿರೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಆಶಿಸಿದ್ದಾರೆ. ಇದರೊಂದಿಗೆ ಜಿಲ್ಲೆಯ ಸ್ವಾಸ್ಥ್ಯಕ್ಕೆ ತಾನು ಸದಾ ಸಿದ್ಧ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.