ಬಂಟ್ವಾಳ: ವಿಭಜನೆ ನೀತಿಯನ್ನು ಬಿಜೆಪಿ ಅನುಸರಿಸುತ್ತಿದ್ದು, ಇದರ ವಿರುದ್ಧ ಹೋರಾಟಕ್ಕೆ ಸಿದ್ದರಾಗಬೇಕಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಭವ್ಯಾ ನರಸಿಂಹಮೂರ್ತಿ ಹೇಳಿದರು. ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡಿನಲ್ಲಿ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮಹಿಳಾ ಕಾರ್ಯಕಾರಿಣಿ ಹಾಗೂ ರಕ್ಷಾಬಂಧನ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ತಿಂಗಳಲ್ಲೇ ಒಂದು ಕೋಟಿ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಓಟು ಪಡೆಯಲು ದೇಶವನ್ನು ವಿಭಜಿಸುತ್ತಿರುವ ಕೇಂದ್ರ ಸರ್ಕಾರ , ಕಾಂಗ್ರೆಸ್ ತಂದ ಯೋಜನೆಗಳ ಮರುನಾಮಕರಣ ಮಾಡುತ್ತಿದ್ದಾರೆ. ಕೊರೋನಾದಿಂದಾಗಿ ದೇಶ ಶೋಕದಲ್ಲಿದೆ. ಅತ್ಯಾಚಾರ , ಅನಾಚಾರ ಹೆಚ್ಚಾಗಿದೆ , ಪ್ರತಿಭಟನೆಯ ಹೆಸರಿನಲ್ಲಿ ಸಾವು ನೋವುಗಳಾಗಿವೆ . ಹೊಸತನವನ್ನು ರಾಜಕೀಯಕ್ಕೆ ನೀಡುವಂತಾಗಲು ಹೊಸ ಕ್ರಾಂತಿಯ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಬಂಟ್ವಾಳ ಉಸ್ತುವಾರಿ ಸವಿತಾ ರಮೇಶ್ ಮಾತನಾಡಿ , ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರನ್ನು ಕಾಂಗ್ರೆಸ್ ವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು. ಲೆಟರ್ ಹೆಡ್ ಬಳಸಿ ಆಗುವುದಕ್ಕಿಂತ ನಿರಂತರ ಪಕ್ಷದೊಂದಿಗಿದ್ದು ಗೆಲುವಿಗೆ ಶ್ರಮಿಸಿದರೆ ಮಹಿಳೆಯರು ಮುಂಚೂಣಿಯಲ್ಲಿರಲು ಸಾಧ್ಯ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ,ಶ್ರೀಮತಿ ಧನಭಾಗ್ಯ ಆರ್ ರೈ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ , ಕೆಪಿಸಿಸಿ ಸದಸ್ಯರಾದ ಮಮತಾಗಟ್ಟಿ , ವೀಣಾ ಭಟ್ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ , ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಜಿ.ಪಂ. ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್ , ಚಂದ್ರಪ್ರಕಾಶ ಶೆಟ್ಟಿ , ಪದ್ಮಶೇಖರ ಜೈನ್ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ 11 ಮಂದಿ ಹಿರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನನ್ನು ಸನ್ಮಾನಿಸಲಾಯಿತು . ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿದರು. ಬಂಟ್ವಾಳ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.