ಪುತ್ತೂರು: ಪೇಟೆಯಿಂದ ಎಪಿಎಂಸಿ ಗೆ ಸಂಪರ್ಕಿಸುವ ರಸ್ತೆಯೂ ಗುಂಡಿಗಳಿಂದ ತುಂಬಿದ್ದು, ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಸವಾರರಿಗೆ ಒಂದು ಹರ ಸಾಹಸವಾಗಿದೆ. ಆದರ್ಶ ಆಸ್ಪತ್ರೆಯ ಬಳಿ ಸ್ಥಳೀಯರೇ ಸಿಮೆಂಟ್ ಹಾಕಿ ಅದನ್ನು ರಕ್ಷಿಸಲು ಗಿಡದ ಚಟ್ಟಿಯನ್ನೂ ಇಟ್ಟಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು, ಅದೇ ರೀತಿ ಸ್ಥಳೀಯ ಆಟೋ ಚಾಲಕರು ಅಲ್ಲೇ ಪಕ್ಕದಲ್ಲಿ ಇರುವ ಗುಂಡಿಗಳಿಗೆ ಸಿಮೆಂಟ್, ಮರಳನ್ನು ತಂದು ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಿದ್ದರು. ಈ ಬಗ್ಗೆ Zoom.inTV ಯೂ ಕೆಲದಿನಗಳ ಹಿಂದೆ ವರದಿ ಮಾಡಿದ್ದು ಇದರ ಫಲಶ್ರುತಿಯಾಗಿ ಇಂದು ನಗರ ಸಭೆ ಪೌರಾಯುಕ್ತರು, ನಗರ ಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಈ ರಸ್ತೆಯಲ್ಲಿ ಕೆಲವು ಹೊಂಡಗಳಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ನಾವು ಇಂದು ಸ್ಥಳ ತನಿಖೆಯನ್ನು ಮಾಡಿದ್ದೇವೆ. ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಹಾಗೇ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ.

ಎಪಿಎಂಸಿ ಯವರು ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಮಾಡಿದ್ದಾರೆ. ಈ ರಸ್ತೆಯನ್ನು ಪೂರ್ತಿಯಾಗಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ನಗರಸಭೆಗೆ ಹಸ್ತಾಂತರವನ್ನು ಮಾಡುತ್ತೇವೆ ಎಂದಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದಾಗಿ ನಾವು ಹೊಂಡ ಮುಚ್ಚುವಂತಹ ಕೆಲಸಕಾರ್ಯಗಳನ್ನು ಮಾಡುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪೌರಯುಕ್ತ ಮಧುಸೂದನ್, ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಇಂಜಿನಿಯರ್ ಶ್ರೀಧರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.





























