ಪುತ್ತೂರು: ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಅಪ್ರಾಪ್ತ ವಿದ್ಯಾರ್ಥಿನಿಗೆ ಚಾಕಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಕಿರುಕುಳ ನೀಡಿದ ಮತ್ತು ವಿದ್ಯಾರ್ಥಿನಿ ಆತನಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಮನೆ ಸೇರಿದ ಘಟನೆ ಕುಂಜೂರು ಪಂಜದಲ್ಲಿ ನಡೆದಿದೆ.
ಕುಂಜೂರು ಪಂಜ ಶಾಲೆಯ ವಿದ್ಯಾರ್ಥಿನಿ ಸೆ.21 ರಂದು ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಆಕೆಯ ಬಳಿ ಬೈಕ್ ನಿಲ್ಲಿಸಿ ನಿನಗೆ ಚಾಕಲೇಟ್ ಕೊಡಿಸುತ್ತೇನೆ, ನನ್ನೊಂದಿಗೆ ಬೈಕ್ ನಲ್ಲಿ ಬಾ ಎಂದು ಕರೆದಿರುವುದಾಗಿ ಹೇಳಲಾಗಿದೆ.
ಆತಂಕಗೊಂಡ ಬಾಲಕಿ ಅಲ್ಲಿಂದ ಓಡಿ ಸುರಕ್ಷಿತವಾಗಿ ಮನೆ ಸೇರಿದ ಘಟನೆ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮನೆಯವರು ಘಟನೆ ಕುರಿತು ಪೊಲೀಸರಿಗೆ ಹಾಗೂ ಶಾಲೆಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.