ಮಡಿಕೇರಿ: ಜೀವನದಿ, ದೈವ ಸ್ವರೂಪಿಣಿ ಕಾವೇರಿ ತನ್ನ ಭಕ್ತರಿಗೆ ತೀರ್ಥ ರೂಪಣಿಯಾಗಿ ದರ್ಶನ ನೀಡಿದ್ದಾಳೆ. ಹೌದು.. ತಲಕಾವೇರಿಯಲ್ಲಿ ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಿದ್ದು, ಭಕ್ತರು ತೀರ್ಥದಲ್ಲಿ ಮಿಂದೆದ್ದು ಪಾವನರಾಗಿದ್ದಾರೆ.
ತೀರ್ಥೋದ್ಭವ ಸಂದರ್ಭದಲ್ಲಿ ಆರು ಅರ್ಚಕರಿಂದ ವಿಶೇಷ ಮಹಾಪೂಜೆ ನಡೆಯಿತು. ಪ್ರಧಾನ ಅರ್ಚಕ ಗುರು ರಾಜಾಚಾರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಬೆಳಗ್ಗೆಯಿಂದಲೇ ಬ್ರಹ್ಮ ಕುಂಡಿಕಗೆ ನಿತ್ಯಪೂಜೆ, ಕುಂಕುಮಾರ್ಚನೆ, ಮಹಾ ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ಜರುಗಿದವು.
ಭದ್ರತೆ ನಿಯೋಜನೆ
ಕೋವಿಡ್ ಹಿನ್ನೆಲೆ ಈ ಭಾರೀ ಹಲವು ನಿರ್ಬಂಧ ಹೇರಲಾಗಿದೆ. ತೀರ್ಥೋದ್ಭವದ ಸಂದರ್ಭ ಕೊಳಕ್ಕೆ ಇಳಿದು ಪುಣ್ಯ ಸ್ನಾನ ಮಾಡಲು ಅವಕಾಶ ನೀಡಿಲ್ಲ. ಜೊತೆಗೆ ಭಕ್ತರಿಗೆ ತೀರ್ಥ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇಂದಿನಿಂದ ತಲಕಾವೇರಿಯಲ್ಲಿ ಒಂದು ತಿಂಗಳ ಜಾತ್ರೋತ್ಸವ ನಡೆಯಲಿದೆ. ತಲಕಾವೇರಿ, ಭಾಗಮಂಡಲದಲ್ಲಿ ಭದ್ರತೆಗೆ KSRP, ಪೊಲೀಸರ ನಿಯೋಜನೆ ಮಾಡಲಾಗಿದೆ.
ಕಳೆದ ವರ್ಷ ಅಕ್ಟೋಬರ್ 18 ರ ಮಧ್ಯರಾತ್ರಿ 12.57ಕ್ಕೆ ಕರ್ಕಾಟಕ ಲಗ್ನದಲ್ಲಿ ಭಕ್ತರ ನಂಬಿಕೆಯ ಕಾವೇರಿ ತೀರ್ಥೋದ್ಭವವಾಗಿತ್ತು. ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ.