ಗುರುಪುರ: ಕಳೆದೆರಡು ದಿನಗಳ ಹಿಂದೆ ಗುರುಪುರ ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ಇಂದು ಮರವೂರು ಸೇತುವೆಯ ಹೊಳೆಯಲ್ಲಿ ಶವ ಪತ್ತೆಯಾಗಿದೆ.
ಗಂಜಿಮಠ ಸಮೀಪ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸತೀಶ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಕೌಟುಂಬಿಕ ಸಮಸ್ಯೆಯಿಂದ ಮನನೊಂದ ಎಡಪದವು-ಗಂಜಿಮಠದ ಯುವಕ ಸತೀಶ್ ತನ್ನ ಆತ್ಮೀಯರೊಬ್ಬರಿಗೆ ವಾಟ್ಸಪ್ ನಲ್ಲಿ “ತಾನು ಗುರುಪುರದ ಸೇತುವೆಯಿಂದ ಹೊಳೆಗೆ ಹಾರಿ ಸಾಯುತ್ತಿದ್ದೇನೆ, ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಆಗುತ್ತಿದೆ ಇದರಿಂದ ಮನನೊಂದ ನನಗೆ ಜೀವನವೇ ಬೇಡವಾಗಿದೆ, ನನ್ನ ಸ್ಕೂಟಿ ಮೊಬೈಲ್ ಸೇತುವೆಯ ಮೇಲಿದ್ದು ನನ್ನನ್ನು ಕ್ಷಮಿಸಿ” ಎಂಬ ಸಂದೇಶ ರವಾನಿಸಿ ಹೊಳೆಗೆ ಹಾರಿದ್ದಾನೆ.
ವಿಷಯ ತಿಳಿದ ಕೂಡಲೇ ಬಜಪೆ ಠಾಣೆ ಪೊಲೀಸರ ಸಹಿತ ನುರಿತ ಈಜುಗಾರರಿಂದ ಹುಡುಕಾಟ ಆರಂಭವಾಗಿತ್ತು. ಇಂದು ಮುಂಜಾನೆ ಮರವೂರು ಸೇತುವೆಯ ಹೊಳೆಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮನೆಯವರ ಸಹಿತ ಹಲವರು ಮೃತದೇಹದ ಗುರುತು ಪತ್ತೆಹಚ್ಚಿದ್ದು, ಕೈಯ್ಯಲ್ಲಿರುವ ಟ್ಯಾಟೋ ಗುರುತಿನಿಂದಾಗಿ ಸತೀಶ್ ನದ್ದೇ ಮೃತದೇಹ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.