ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಮತ್ತೊಮ್ಮೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬಹುಮಹಡಿ ಕಟ್ಟಡವೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಮುಂಬೈನ ಕರೇ ರಸ್ತೆಯಲ್ಲಿರುವ ಲೋವರ್ ಪರೇಲ್ ಏರಿಯಾದ ಅವಿಜ್ಞಾ ಪಾರ್ಕ್ ಅಪಾರ್ಟ್ಮೆಂಟ್ನ 19ನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ನಂದಿಸುವ ಪ್ರಯತ್ನದಲ್ಲಿವೆ. ಈ ದುರಂತದಲ್ಲಿ ಬೆಂಕಿ ಹೊತ್ತಿಕೊಂಡಿರುವ ಫ್ಲಾಟ್ನ ಕಿಟಕಿಯಿಂದ ಬಚಾವಾಗಲು ಪ್ರಯತ್ನಿಸಿದ ವ್ಯಕ್ತಿಯೊಬ್ಬ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.
ಇದು ರೆಸಿಡೆನ್ಷಿಯಲ್ ಕಟ್ಟಡವಾಗಿರುವುದರಿಂದ ಕಟ್ಟಡದೊಳಗೆ ಕುಟುಂಬಗಳು ವಾಸವಾಗಿದ್ದಾರೆ. ಹೀಗಾಗಿ, ಬೆಂಕಿ ಹೊತ್ತಿಕೊಂಡ ಕಟ್ಟಡದೊಳಗೆ ಸಾಕಷ್ಟು ಜನರು ಸಿಲುಕಿರುವ ಸಾಧ್ಯತೆಯಿದೆ. ಮುಂಬೈನ 60 ಮಹಡಿಯ ಅಪಾರ್ಟ್ಮೆಂಟ್ನ 19ನೇ ಮಹಡಿಯಲ್ಲಿ ಅಗ್ನಿ ಆಕಸ್ಮಿಕ ನಡೆದಿದ್ದು, 17ರಿಂದ 25ನೇ ಮಹಡಿಯವರೆಗೂ ಬೆಂಕಿ ವ್ಯಾಪಿಸಿದೆ. ಕಟ್ಟಡದ ಮೇಲಿಂದ ಬಿದ್ದು ಸಾವನನ್ಪ್ಪಿದ ವ್ಯಕ್ತಿಯನ್ನು 30 ವರ್ಷದ ಅರುಣ್ ತಿವಾರಿ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ರಕ್ಷಿಸಿಕೊಳ್ಳುವಾಗ ಕೆಳಗೆ ಬಿದ್ದು ಆತ ಸಾವನ್ನಪ್ಪಿದ್ದಾನೆ.
60 ಮಹಡಿಗಳಿರುವ ಈ ಪಾರ್ಟ್ಮೆಂಟ್ನ 19ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ 26 ಜನರನ್ನು ರಕ್ಷಿಸಲಾಗಿದೆ. ಮೇಯರ್ ಸೇರಿದಂತೆ ಬಿಎಂಸಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ವ್ಯಾಪಿಸುತ್ತಲೇ ಇರುವ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಈ ಅಗ್ನಿ ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಹಾಲ್ ಆದೇಶ ನೀಡಿದ್ದಾರೆ. ಅಪಾರ್ಟ್ಮೆಂಟ್ ನಿವಾಸಿಗಳ ಪ್ರಕಾರ ಆ ಅಪಾರ್ಟ್ಮೆಂಟ್ನಲ್ಲಿ ಎಲ್ಲ ರೀತಿಯ ಬೆಂಕಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿತ್ತು. ಆದರೂ ಬೆಂಕಿ ದುರಂತ ಸಂಭವಿಸಿದೆ.