ಪುತ್ತೂರು: ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ಖಂಡಿಸಿ ಪ್ರಕರಣದ ನಿಜಾಂಶವನ್ನು ಬಯಲು ಮಾಡುವಂತೇ, ಈ ಪ್ರಕರಣ ಯಾವುದೋ ವ್ಯಕ್ತಿಯ ವಿರುದ್ಧದ ಷಡ್ಯಂತ್ರದ ಭಾಗವಾಗಿದ್ದಲ್ಲಿ ಅಥವಾ ಶಿಕ್ಷಕರ ಮಾನಹರಣ ಮಾಡುವ ಉದ್ದೇಶದಿಂದ ನಡೆದಿದ್ದು ಆಗಿದ್ದಲ್ಲಿ ಅದನ್ನು ಎನ್. ಎಸ್. ಯು.ಐ. ಖಂಡಿಸುತ್ತದೆ ಎಂದು ಎನ್ಎಸ್ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತಿಷ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಬಳಸಿಕೊಂಡು ಯಾವುದೇ ಚಾರಿತ್ರ್ಯದಲ್ಲಿ ಕಳಂಕ ಹೊಂದಿರದ ಶಿಕ್ಷಕನ ಮಾನಹರಣ ಮಾಡುವುದು ಅತ್ಯಂತ ಖಂಡನೀಯ. ಒಂದು ವೇಳೆ ಶಿಕ್ಷಕರು ತಪ್ಪು ಮಾಡಿದ್ದೇ ಆಗಿದ್ದಲ್ಲಿ ಅವರಿಗೆ ಶಿಕ್ಷೆ ಆಗಲೇಬೇಕು. ಇದನ್ನು ಎನ್ಎಸ್ಯುಐ ಖಂಡಿಸುತ್ತದೆ ಎಂದರು.
ಪೊಕ್ಸೊ ಕಾಯ್ದೆಯನ್ನು ಇಲ್ಲಿ ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಒಂದು ವೇಳೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದೆ ಆಗಿದ್ದಲ್ಲಿ ಇಡೀ ವಿದ್ಯಾರ್ಥಿ ಸಮುದಾಯವೇ ಆಕೆಯ ಜೊತೆಗಿರುತ್ತದೆ. ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ವಿದ್ಯಾರ್ಥಿನಿಗೆ ನ್ಯಾಯವನ್ನು ಒದಗಿಸಬೇಕು.
ಅಥವಾ ಇದು ಷಡ್ಯಂತ್ರವಾಗಿದ್ದರೇ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರನ್ನು ಬಂಧಿಸಬೇಕು ಎಂದು ಹೇಳಿದರು.
ಎನ್ಎಸ್ಯುಐ ದ.ಕ. ಜಿಲ್ಲಾ ಕಾರ್ಯದರ್ಶಿ ಲ್ಯಾಸ್ಟರ್ ಪಿಂಟೋ ಮಾತನಾಡಿ, ಶಿಕ್ಷಕರು ನಿರಪರಾಧಿಯಾಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಬೇಕು, ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದಲ್ಲಿ ಆಕೆಗೆ ನ್ಯಾಯ ಒದಗಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಸಮಸ್ಯೆಗಳು ಬಾರದಂತೆ ತಡೆಯಲು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದೈಹಿಕ ಶಿಕ್ಷಕರನ್ನು ನೇಮಿಸುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಎನ್ಎಸ್ಯುಐ ಅಧ್ಯಕ್ಷೆ ವೀರಾ ಜೆನ್ನಿಫರ್ ಡಿಸೋಜ, ಫಿಲೋಮಿನಾ ಕಾಲೇಜಿನ ಎನ್ಎಸ್ಯುಐ ಅಧ್ಯಕ್ಷ ಎಡ್ವರ್ಡ್ ಡಿಸೋಜ, ವಿಶಾಲ್ ಹಾಗೂ ಎನ್ಎಸ್ಯುಐ ಕಾರ್ಯಕರ್ತರು ಉಪಸ್ಥಿತರಿದ್ದರು.