ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಲು ನಿರ್ಧರಿಸಿದ ಬಗ್ಗೆ ಮಾಹಿತಿ ಪಡೆದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಹಿಂದೂ ಪರಿವಾರ ಸಂಘಟನೆಗಳ ಮುಖಂಡರು ಯುವತಿಯ ಮನೆಗೆ ನ. 20 ರಂದು ಭೇಟಿ ನೀಡಿದರು.
ವೈದ್ಯಕೀಯ ಶಿಕ್ಷಣ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಯುವತಿ ಮೇಘಾ ಜತೆ ಆಕೆಯ ತಂದೆ ತಾಯಿ ಹಾಗೂ ಚಿಕ್ಕಮ್ಮನ ಸಮ್ಮುಖ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಮಾತುಕತೆ ನಡೆಸಿದರು.
ಗಂಟೆಗಳ ಕಾಲ ಯುವತಿ ಹಾಗೂ ಮನೆಯವರ ಜತೆ ವಿಚಾರ ವಿನಿಮಯವನ್ನು ಸ್ವಾಮೀಜಿಯವರು ನಡೆಸಿದ್ದಾರೆ.ಈ ವೇಳೆ ಮುಸ್ಲಿಂ ಯುವಕನನ್ನು ಮದುವೆಯಾದರೆ. ಆ ಬಳಿಕ ಹಿಂದೂ ಧರ್ಮದ ಅಚರಣೆ ಸಂಪ್ರದಾಯವನ್ನು ಬಿಟ್ಟು ಹೋಗಬೆಕಾದ ಆನಿವಾರ್ಯತೆ, ಆ ಬಳಿಕ ಜೀವನದಲ್ಲಿ ಎದುರಿಸಬೇಕಾದ ತೊಳಲಾಟ, ಧಾರ್ಮಿಕ ಸಂದಿಗ್ದತೆಗಳು, ಲೌಕಿಕ ಹಾಗೂ ಅದ್ಯಾತ್ಮಿಕ ಬದುಕಿನಲ್ಲಿ ಉಂಟಾಗಬಹುದಾದ ಸಂಘರ್ಷಗಳು , ಇದರಿಂದ ದೇಹ ಹಾಗೂ ಮನಸ್ಸಿನ ಮೇಲಾಗುವ ಘಾತಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಯುವತಿಯ ಹಾಗೂ ಮನೆಯವರ ಮನವೊಲಿಕೆಯ ಬಳಿಕ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ‘ದೇವರ ಅನುಗ್ರಹದಿಂದ ಮನವೊಲಿಕೆಯ ಕಾರ್ಯ ಯಶಸ್ವಿಯಾಗಿದೆ. ಪ್ರತಿಷ್ಠಿತ ಹಿಂದೂ ಕುಟುಂಬವೊಂದು ಹಿಂದೂ ಧರ್ಮದಲ್ಲಿಯೇ ಉಳಿಯಬೇಕೆಂಬ ನಿಟ್ಟಿನಲ್ಲಿ ನಾವು ಹಾಗೂ ಪರಿವಾರ ಸಂಘಟನೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡೆವು. ಯುವತಿ ಮೇಘಾ ಒಳ್ಳೆಯ ಗುಣ ನಡತೆ ಹೊಂದಿದ್ದು ಆಕೆಯ ಜತೆಗಿನ ಮಾತುಕತೆ ಫಲಪ್ರದವಾಗಿದೆ’ ಎಂದಿದ್ದಾರೆ.