ಬಂಟ್ವಾಳ: ಮೆಲ್ಕಾರ್ ನಲ್ಲಿ ಎರಡು ತಂಡಗಳು ಪರಸ್ಪರ ಹೊಡೆದಾಡಿದ ಪ್ರಕರಣ ವೈರಲ್ ಆಗುತ್ತಿದ್ದಂತೆ, ಘಟನೆಯ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಎಂಬವರಿಗೆ ಅವಿನಾಶ್ ಎಂಬವರು ಹಲ್ಲೆ ನಡೆಸಿದ್ದು ಇದರ ರಾಜಿ ಪಂಚಾಯತಿಗಾಗಿ ಮೆಲ್ಕಾರ್ ಗೆ ಎರಡು ತಂಡಗಳು ಬಂದು ಸೇರಿದ್ದವು.
ಇದೇ ವಿಚಾರವಾಗಿ ಮಾತಿಗೆ ಮಾತಿಗೆ ಬೆಳೆದು ರಾಜಿ ಪಂಚಾಯಿತಿಗೆ ಮುರಿದು ಪರಸ್ಪರ ಮರದ ಸೊಂಟೆಯಿಂದ ಹಾಗೂ ಸೋಡ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ಬಳಿಕ ಒಂದು ತಂಡ ಒಮ್ನಿ ಕಾರಿನಲ್ಲಿ ಕಾಲ್ಕಿತ್ತಿದೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಪೊಲೀಸರನ್ನು ನೋಡಿ ಇನ್ನೊಂದು ತಂಡ ಕೂಡ ಪರಾರಿಯಾಗಿತ್ತು.
ಈ ಘಟನೆಯ ಬಗ್ಗೆ ಎರಡು ತಂಡಗಳು ಯಾವುದೇ ದೂರನ್ನು ಈವರಗೆ ಪೋಲೀಸ್ ಠಾಣೆಗೆ ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಲ್ಲದೆ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪ್ರಕರಣವಾಗಿದ್ದರಿಂದ ಪೋಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಠಾಣೆ ಠಾಣೆಯಲ್ಲಿ ಅ.ಕ್ರ.134/2021 ಕಲಂ: 160 ಐಪಿಸಿಯಂತೆ 143,147,148,149 ಪ್ರಕರಣ ದಾಖಲಾಗಿದೆ.