ವಿಟ್ಲ: ಮುಡ್ನೂರು ಗ್ರಾಮದ 3ನೇ ವಾರ್ಡಿಗೊಳಪಟ್ಟ ಪಿಲಿಂಜ, ಚಪ್ಡಿಯಡ್ಕ, ಕಟ್ಟತ್ತಿಲ ಮತ್ತು ಕಳುವಾಜೆ ಪರಿಸರದ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಸರಬರಾಜಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಪಂ.ನ ವಾಟರ್ ಮ್ಯಾನಲ್ಲಿ ವಿಚಾರಿಸಿದಾಗ “ನಿಮಗೆ ಇನ್ನೂ ಹದಿನೈದು ದಿನ ನೀರಿಲ್ಲ…ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ನೀರು ಬೇಕಾಗಿದೆ. ಅದಕ್ಕಾಗಿ ಹದಿನೈದು ದಿನ ನೀರು ಸರಬರಾಜು ಮಾಡುವಂತಿಲ್ಲ ಎಂಬ ಉಡಾಫೆಯ ಉತ್ತರ ನೀಡಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು.
ಇದ್ಯಾವ ನ್ಯಾಯ..?? ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾಗಿರುವ ಕುಡಿಯುವ ನೀರನ್ನೇ ಸರಬರಾಜು ನಿಲ್ಲಿಸಿ (ಅದೂ ಹದಿನೈದು ದಿನಗಳ ಕಾಲ) ರಸ್ತೆ ಕಾಂಕ್ರಿಟೀಕರಣ ಮಾಡುವುದಾದರೆ ಬಡ ಜನರ ಗೋಳು ಕೇಳೋರ್ಯಾರು..? ರಸ್ತೆ ಕಾಮಗಾರಿಯ ಗುತ್ತಿಗೆ ನಿಯಮದಲ್ಲಿ ಕುಡಿಯುವ ನೀರು ನಿಲ್ಲಿಸಿ ಕೊಡಬೇಕೆಂಬ ನಿಯಮವಿದೆಯೇ.? ಗುತ್ತಿಗೆದಾರನಿಗೆ ಇಂಥಾ ದುರ್ಗತಿ ಬಂತೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಪಂ. ಪಿಡಿಒ ರವರನ್ನು ಪ್ರಶ್ನಿಸಿದಾಗ…”ನಾನು 7ನೇ ತಾರೀಕಿನಿಂದ ಪಂ.ಗೆ ಹೋಗಿಲ್ಲ. ಚುನಾವಣಾ ಡ್ಯೂಟಿಯಲ್ಲಿದ್ದೇನೆ. ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುವ ವಿಚಾರ ಗೊತ್ತೇ ಇಲ್ಲ ಎಂಬ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಬೇಜವಾಬ್ದಾರಿ ಉತ್ತರದಿಂದ ಗ್ರಾಮಸ್ಥರ ನೀರಿನ ಸಮಸ್ಯೆ ಬಗೆಹರಿಯುವುದೇ.? ಚುನಾವಣಾ ಕರ್ತವ್ಯಕ್ಕೆ ಹೋದರೆ ಗ್ರಾಮದ ಪ್ರತಿನಿತ್ಯದ ಆಗು ಹೋಗುಗಳ ಬಗ್ಗೆ ಅರಿಯಬೇಡವೇ.? ಪಂ.ನ ಬೇಜವಾಬ್ದಾರಿಯಿಂದ ರೋಸಿ ಹೋದ 3ನೇ ವಾರ್ಡಿನ ಕುಡಿಯುವ ನೀರಿನ ಫಲಾನುಭವಿಗಳು, ಸಾರ್ವಜನಿಕ ದೂರು ಅರ್ಜಿ ನೀಡಿದ್ದು ತಕ್ಷಣವೇ ಅವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.




























