ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಗ್ಗಿನ ಜಾವ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ರಿಷಿ ಕುಮಾರ್ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.




























