ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಅಂದ್ರಟ್ಟ ಎಂಬಲ್ಲಿ ರೈಲ್ವೇ ಸುಪರ್ದಿಯಲ್ಲಿರುವ ಸ್ಥಳದಲ್ಲಿ ಗಿಡಗಂಟಿಗಳ ಮಧ್ಯೆ ಅಪರಿಚಿತ ಶವದ ಮರಣೋತ್ತರ ಪರೀಕ್ಷೆಯು ಫೆ.೨೦ರಂದು ನಡೆಸಲಾಗಿದ್ದು ಪುರುಷನ ಮೃತದೇಹ ಎಂದು ವೈದ್ಯರು ದೃಢಪಡಿಸಿದ್ದಾರೆ.
ಕಬಕ ಪುತ್ತೂರು ರೈಲ್ವೇ ನಿಲ್ದಾಣದ ೫೦ ಮೀಟರ್ ದೂರದಲ್ಲಿರುವ ರೈಲ್ವೇ ಇಲಾಖೆಗೆ ಒಳಪಟ್ಟ ರೈಲ್ವೇ ವಸತಿ ಗೃಹಗಳಿರುವ ಅಂದ್ರಟ್ಟ ಎಂಬ ಸ್ಥಳದಲ್ಲಿ ಫೆ.೧೯ರಂದು ಕೊಳೆತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ರೈಲ್ವೇ ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳು ಗುಂಪಾಗಿರುವುದನ್ನು ಪರಿಶೀಲಿಸಿದಾಗ ಅಪರಿಚಿತ ಶವ ಇರುವುದು ಬೆಳಕಿಗೆ ಬಂದಿದ್ದು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿರುವುದರಿಂದ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸ್ಥಳಕ್ಕೆ ಸರಕಾರಿ ವೈದ್ಯರು ಆಗಮಿಸಿದ್ದರು. ಆದರೆ ರಾತ್ರಿ ವೇಳೆ ಪೊದೆಯಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಫೆ.೨೦ರಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಪುರುಷನ ಮೃತದೇಹ ಎಂದು ಗುರುತಿಸಿದ್ದಾರೆ.
ಮೃತ ವ್ಯಕ್ತಿಗೆ ಸುಮಾರು ೫೦ವರ್ಷ ಆಗಿರ ಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ರಾತ್ರಿಯಿಂದ ಬೆಳಗ್ಗಿನ ತನಕ ಮೃತದೇಹವನ್ನು ಕಾವಲು ಕಾದಿದ್ದರು. ಶವ ಮೇಲ್ನೊಟಕ್ಕೆ ಪ್ಯಾಂಟ್ ಶರ್ಟ್ ಧರಿಸಿದ ಪುರುಷನಂತೆ ಹೋಲುತ್ತಿದೆ. ಮೃತ ವ್ಯಕ್ತಿಯ ಬಟ್ಟೆಗಳು ಹರಿದು ಹೋಗಿದ್ದರಿಂದ ಪುರುಷ ಅಥವಾ ಮಹಿಳೆಯ ಮೃತದೇಹವೇ ಎಂದು ಗುರುತು ಹಿಡಿಯಲಾದ ಮಟ್ಟಿಗೆ ಕೊಳೆತು ಹೋಗಿತ್ತು.
ನಗರ ಸಭಾ ಆರೋಗ್ಯ ನಿರೀಕ್ಷಕ ರಾಮಚಂದ್ರ, ಠಾಣಾ ಎಎಸ್ಐ ಲೋಕನಾಥ, ಹಾಗೂ ಸಿಬಂದಿಗಳು ಮೃತ ಮಹಜರು ನಡೆಸಿ ಮೃತದೇವನ್ನು ತೆರವುಗೊಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.