ಮಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಂಗಳೂರು ಮುಸ್ಲಿಂ ಎಂಬ ಫೇಸ್ ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಮಣಿಪಾಲ ಮೂಲದ ಓರ್ವ ಮತ್ತು ಮುಲ್ಕಿ ಮೂಲದ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಮಂಗಳೂರು ಮುಸ್ಲಿಂ ಎಂಬ ಖಾತೆಯ ಕುರಿತು ತನಿಖೆ ಮುಂದುವರೆದಿದ್ದು, ಮೂಲವನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಹರ್ಷ ಹತ್ಯೆಗೂ ಮುನ್ನ ಬೆದರಿಕೆ ಸ್ವರೂಪದ ಪೋಸ್ಟ್ ಗಳನ್ನೂ ಪೇಜ್ ನಲ್ಲಿ ಮಾಡಲಾಗಿತ್ತು, ಹರ್ಷ ಮಾತ್ರವಲ್ಲದೆ ಪತ್ರಕರ್ತರೊಬ್ಬರಿಗೂ ಟಾರ್ಗೆಟ್ ಮಾಡಿ ಬರೆಯಲಾಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಪೇಜ್ ನ ಜಾಡು ಬೆನ್ನತ್ತಿದ್ದಾರೆ.ಪ್ರಚೋದನಕಾರಿ ಪೋಸ್ಟ್ ಮಾಡಿದ ಫೇಸ್ ಬುಕ್ ಖಾತೆಯ ವಿರುದ್ಧ ಮಂಗಳೂರಿನಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.
“ಸಾರ್ವಜನಿಕರು ತಮ್ಮ ಖಾತೆ ಟ್ರ್ಯಾಕಿಂಗ್ ಆಗಿರುವ ಬಗ್ಗೆ ಆತಂಕ ಪಡಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಆಕ್ಷೇಪಾರ್ಹ ಪೋಸ್ಟ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ ಖಾತೆಗಳ ಮೇಲೆ ಮಾತ್ರ ನಿಗಾ ಇಡಲಾಗಿದೆ . ಸಾಮಾಜಿಕ ಮಾಧ್ಯಮವು ಪ್ರಬಲ ಅಸ್ತ್ರವಾಗಿದೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಆದರೆ ಅದನ್ನು ದುರುಪಯೋಗಪಡಿಸಬೇಡಿ” ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಟ್ರೋಲ್ ಕಿಂಗ್ 193’ ಇನ್ಸ್ಟ್ರಾ ಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್ಗಳನ್ನು ಮೇರೆಗೆ ಪೇಜ್ನ ಅಡ್ಮಿನ್, ಕೊಣಾಜೆಯ ನಿವಾಸಿ ಎಸ್ಎಸ್ಎಲ್ಸಿ ಫೇಲ್ ಆಗಿರುವ ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆಯಲಾಗಿದೆ. ದೇವಸ್ಥಾನಗಳ ಬಗ್ಗೆ ಮತ್ತು ಇನ್ನೂ ಅನೇಕ ಆಕ್ಷೇಪಾರ್ಹ ಪೋಸ್ಟ್ಗಳನ್ನು ಈ ಪೇಜ್ ಹೊಂದಿದೆ.
ಆರೋಪಿಯ ಬಳಿ ಆಕ್ಷೇಪಾರ್ಹ ಪೋಸ್ಟ್ ಮಾರ್ಫ್ ಮಾಡಲು, ಎಡಿಟ್ ಮಾಡಲು ಬೇಕಾದ ಗ್ಯಾಜೆಟ್ ಗಳು, ಸಾಫ್ಟ್ ವೇರ್ ಗಳಿದ್ದವು. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು. ಈತ ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಯಾರಿಂದಲಾದರೂ ಬೆಂಬಲ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್ನಲ್ಲಿ ತಾನೇ ಈ ಪೋಸ್ಟ್ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
೨೦೧೬ ರಲ್ಲೂ ಕಟೀಲು ದೇವಿ ಮತ್ತು ಸೀತಾ ಮಾತೆಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಖಾತೆಯನ್ನು ಬ್ಲಾಕ್ ಮಾಡಿಸಲು ಫೇಸ್ ಬುಕ್ ಗೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.
ವಾಟ್ಸಾಪ್ ಗ್ರೂಪ್ ಗಳಲ್ಲಿ ಧರ್ಮದ ಮಹಿಳೆಯರಿಗೆ ನಿಬಂಧನೆ ವಿಧಿಸುವ ರೀತಿಯಲ್ಲಿ ಸಂದೇಶಗಳು ಹರಿದಾಡುತ್ತಿದ್ದು, ಅವುಗಳ ಕುರಿತು ತನಿಖೆ ನಡೆಸುವುದಾಗಿ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಈಗಾಗಲೇ ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ / ಅವಹೇಳನಕಾರಿ ಪೋಸ್ಟ್ ಗಳ ಬಗ್ಗೆ ನಿಗಾ ವಹಿಸಲು ಸೋಶಿಯಲ್ ಮೀಡಿಯಾ ಸೆಲ್ ಕಾರ್ಯಾರಂಭಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.