ಮಂಗಳೂರು: ಪಡಿತರ ಅಕ್ಕಿ ಸಂಗ್ರಹ ಮಾಡಿ ಮೈಸೂರು ಕಡೆ ಅಕ್ರಮವಾಗಿ ರವಾನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದೆ.
ಮೂಡುಬಿದಿರೆ ನಿವಾಸಿ ಮುಸ್ತಫಾ (40) ಹಾಗೂ ಬಂಟ್ವಾಳ ಅರಬಿ ಗುಡ್ಡೆ ನಿವಾಸಿ ಮೊಹಮ್ಮದ್ ಖಲಂದರ್ (38) ಬಂಧಿತ ಆರೋಪಿಗಳು.
ಇನ್ನಿಬ್ಬರು ಆರೋಪಿಗಳಾದ ರಫೀಕ್ ಮತ್ತು ರಮೀಝ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೆಲವು ರೇಶನ್ ಅಂಗಡಿ ದಾಸ್ತಾನು ಕೊಠಡಿ ಹಾಗೂ ಸಾರ್ವಜನಿಕರಿಂದ ಕಡಿಮೆ ದರಕ್ಕೆ ಅಕ್ಕಿ ಖರೀದಿ ಮಾಡಿ ಅದನ್ನು ಮೈಸೂರಿನ ಮಿಲ್ಗೆ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಾಡೂರಿನಲ್ಲಿ ದಾಸ್ತಾನು ಕೊಠಡಿ ಉಪಯೋಗಿಸಿ ಈ ಕೃತ್ಯ ಎಸಗುತ್ತಿದ್ದರು ಎಂಬ ಮಾಹಿತಿ ಆಹಾರ ನಾಗರಿಕ ಪೂರೈಕೆ ಇಲಾಖೆ ಹಾಗೂ ಉಳ್ಳಾಲ ಪೊಲೀಸರಿಗೆ ಲಭಿಸಿತ್ತು.
ಈ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಡೂರುನಲ್ಲಿ ದಾಸ್ತಾನಿರಿಸಿದ್ದ ಅಕ್ರಮ ಅಕ್ಕಿ ವಶಕ್ಕೆ ಪಡೆದಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.