ಕಡಬ: ತನ್ನಲ್ಲಿದ್ದ ಕಾರನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದು, ಬ್ರೋಕರ್ ನಿಗದಿತ ಸಮಯಕ್ಕೆ ಹಣ ನೀಡದ ಕಾರಣ ಚೆಕ್ ಬೌನ್ಸ್ ಕೇಸ್ ಪ್ರಕರಣದಲ್ಲಿ ಯುವಕನೊಬ್ಬ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ಪಿಜಕ್ಕಳದ ಅಬ್ದುಲ್ ರವೂಫ್ ಸಂಕಷ್ಟಕ್ಕೆ ಸಿಲುಕಿದ ಯುವಕ. ತನ್ನಲ್ಲಿದ್ದ ಸ್ವಿಫ್ಟ್ ಕಾರನ್ನು 2020 ರ ಸೆಪ್ಟಂಬರ್ ರಂದು ಮದ್ಯವರ್ತಿ ಬಂಟ್ವಾಳ ತಾಲೂಕಿನ ವಳಚ್ಚಿಲ್ ನ ಅಹ್ಮದ್ ಕಬೀರ್ ಎಂಬವರ ಮೂಲಕ ಎರಡು ಲಕ್ಷದ ಎಪ್ಪತ್ತು ಸಾವಿರಕ್ಕೆ ಮಾರಾಟ ಮಾಡಿದ್ದರು. ಕಾರು ಪಡೆಯಲು ಬಂದಿದ್ದ ಬ್ರೋಕರ್ ಕಬೀರ್ 91,000 ರೂ. ಪಾವತಿ ಮಾಡಿ ಉಳಿದ ಹಣವನ್ನು ಐದು ದಿನದೊಳಗೆ ಪಾವತಿಸುವುದಾಗಿ ತಿಳಿಸಿದ್ದ.

ಲೋನ್ ಹಣವನ್ನೂ ಪಾವತಿಸುವುದಾಗಿ ಒಪ್ಪಿಕೊಂಡಿದ್ದು ಹೀಗಾಗಿ ಕಡಬದ ವಕೀಲರೊಬ್ಬರ ಕಚೇರಿಯಲ್ಲಿ ಒಪ್ಪಂದ ಪತ್ರಕ್ಕೂ ಸಹಿ ಮಾಡಲಾಗಿತ್ತು.ಒಪ್ಪಂದ ಪತ್ರದಲ್ಲಿ ನಮೂದಿಸಿರುವಂತೆ ಐದು ದಿನದೊಳಗೆ ಹಣ ಪಾವತಿಸದ ಕಾರಣ ಆತನನ್ನು ಸಂಪರ್ಕಿಸಿದಾಗ ಪೋನ್ ಕರೆಗೆ ಸಿಗಲಿಲ್ಲ ಎನ್ನಲಾಗಿದೆ.
ಕೆಲ ಸಮಯದ ಬಳಿಕ ಕಾರು ಪಡೆದುಕೊಂಡಿದ್ದ ದಾವಣೆಗೆರೆಯ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದರೂ ಫಲಪ್ರದವಾಗಿಲ್ಲ. ಇನ್ನು ಬ್ರೋಕರ್ ಮನೆ ವಿಳಾಸಕ್ಕೂ ವಕೀಲರ ಮೂಲಕ ನೋಟಿಸು ಕಳುಹಿಸಿದರೂ ಆ ವಿಳಾಸದಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಎರಡು ವರ್ಷಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದಾಗಿ ರವೂಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಅಲ್ಲದೆ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ.
ಫೈನಾನ್ಸ್ ನವರ ಒತ್ತಡದಿಂದ ಯುವಕ ನಲ್ವತ್ತು ಸಾವಿರ ರೂ ಪಾವತಿಸಿದರೂ ಸಕಾಲಕ್ಕೆ ಲೋನ್ ಸಂದಾಯವಾಗದ ಕಾಣ ಯುವಕನ ವಿರುದ್ದ ಚಕ್ ಬೌನ್ಸ್ ಕೇಸು ದಾಖಲಿಸಿದ್ದಾರೆ.