ಪುತ್ತೂರು: ಸಂತ ಪ್ರಾನ್ಸಿಸ್ ಕಾಲೇಜು, ಕೋರಮಂಗಳ, ಬೆಂಗಳೂರಿನಲ್ಲಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಶನ್ ಮತ್ತು ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಅಸೋಸಿಯೇಶನ್ ವತಿಯಿಂದ ನಡೆದ ಬಾಲಕ-ಬಾಲಕಿಯರ ಪ್ರಥಮ ಜೂನಿಯರ್ ಡಾಡ್ಜ್ ಬಾಲ್ ಚಾಂಪಿಯನ್ಶಿಪ್-2022 ಸ್ಪರ್ಧೆಯಲ್ಲಿ ಅಕ್ಷಯ ಕಾಲೇಜು ಪುತ್ತೂರಿನ ವಿದ್ಯಾರ್ಥಿನಿ ಕು.ದೇವಿಕಾ ಎಸ್ ರಾಜ್ಯ ತಂಡವನ್ನು ಪ್ರತಿನಿಧಿಸಿ, ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಶಿಪ್ನ್ನು ಪಡೆದುಕೊಂಡಿದ್ದಾರೆ.
ಹಾಗೆಯೇ ರಾಜ್ಯಮಟ್ಟದ ಸ್ಪರ್ದೆಯಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ಅಕ್ಷಯ ಕಾಲೇಜಿನ ಬಾಲಕಿಯರ ತಂಡ ಫೈನಲ್ನಲ್ಲಿ ತುಮಕೂರು ತಂಡದೊಡನೆ ಸ್ಪರ್ಧಿಸಿ ‘ರನ್ನರ್ ಅಪ್’ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.
ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವಿಜೇತ್ ಕುಮಾರ್ ಇವರ ತರಬೇತಿಯೊಡನೆ ಪಟ್ಟೆ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಮೋನಪ್ಪ ಅವರ ಮಾರ್ಗದರ್ಶನದೊಂದಿಗೆ ಕಾಲೇಜಿನ ತಂಡ ಭಾಗವಹಿಸಿತ್ತು.
ಕಾಲೇಜಿನ ಇಂಟೀರಿಯರ್ ಡಿಸೈನ್ ಉಪನ್ಯಾಸಕ ರಕ್ಷಣಾ ಟಿ ಆರ್ ತಂಡದ ನೇತೃತ್ವ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.