ವಿಟ್ಲ: ಬದನಾಜೆಯ ಬಸ್ ನಿಲ್ದಾಣದಲ್ಲಿ ರಕ್ತ ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿ ವಿಚಿತ್ರ ತಿರುವು ಪಡೆದುಕೊಂಡಿದ್ದು, ಮದ್ಯ ಸೇವಿಸಿ ನೆಲಕ್ಕೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ಬದನಾಜೆ ಬಸ್ ತಂಗುದಾಣದಲ್ಲಿದ್ದುದು ನೆಲ್ಲಿಗುಡ್ಡೆಯ ವ್ಯಕ್ತಿಯೆಂದು ತಿಳಿದು ಬಂದಿದೆ. ಈತ ವಿಟ್ಲ ಸಂತೆ ನಡೆಯುವ ಕಟ್ಟಡದ ಬಳಿ ಬಿದ್ದುಕೊಂಡಿದ್ದನೆನ್ನಲಾಗಿದೆ. ವಿಟ್ಲ ಪೊಲೀಸರು ಮಾಹಿತಿ ತಿಳಿದು ಪರೀಕ್ಷಿಸಿದಾಗ ಬದನಾಜೆಯಿಂದ ಆತ ಬಂದಿದ್ದಾನೆಂದು ಖಚಿತವಾಯಿತು. ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಹಂಝ ಎಂದು ಆತನನ್ನು ಗುರುತಿಸಲಾಗಿದೆ.

ಈತ ಕಂಠಪೂರ್ತಿ ಅಮಲುಪದಾರ್ಥ ಸೇವಿಸಿ, ಆಯ ತಪ್ಪಿಬಿದ್ದಿರಬೇಕು. ಗಾಯಗೊಂಡ ಆತನ ಶರೀರದಿಂದ ರಕ್ತ ಬಿದ್ದಿರಬೇಕೆಂದು ಊಹಿಸಲಾಗಿದೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದೀಗ ಹಂಝ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬದನಾಜೆಯಲ್ಲಿ ಬೆಳ್ಳಂಬೆಳಿಗ್ಗೆ ರಕ್ತ ಚೆಲ್ಲಿದ ಕುರುಹು ಪತ್ತೆಯಾಗಿದ್ದರಿಂದ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದ್ದರಿಂದ ಆತಂಕ ವ್ಯಕ್ತವಾಗಿತ್ತು. ಇದೀಗ ಪ್ರಕರಣದ ಸತ್ಯಸತ್ಯಾತೆಯನ್ನು ಪೊಲೀಸರು ಪತ್ತೆ ಹಚ್ಚಿದ್ದರಿಂದ ಆತಂಕ ದೂರವಾಗಿದೆ.

























