ಪುತ್ತೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ನ ಪದಾಧಿಕಾರಿ ತೇಜಸ್ವಿ ಮಂಜ್ರೇಕರ್ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಕೆ. ಆರ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ದೀಪಕ್ ರಾಜಾಹುಲಿ ಜು.18 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.

ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಶಾಲು ಹೊದಿಸಿ ಅವರನ್ನು ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ಅನೇಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದೇವೆ., ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವಂತಹ ಹಠದಿಂದ ಇಂದು ಯುವ ಕಾಂಗ್ರೆಸ್ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೇಶದ ಪ್ರಧಾನಿಯಾದಂತಹ ನರೇಂದ್ರ ಮೋದಿಯವರು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದು, ನಿರುದ್ಯೋಗ ನಿವಾರಿಸುತ್ತೇವೆ, ಪೆಟ್ರೋಲ್ ದರ ಕಡಿಮೆ ಮಾಡುತ್ತೇವೆ ಹೀಗೆ ಅನೇಕ ಸುಳ್ಳು ಆಶ್ವಾಸನೆಯನ್ನು ನೀಡಿ ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ. ಒಂದಷ್ಟು ಯುವಕರು ಈ ದೇಶಕ್ಕೆ ಮೋದಿಯವರು ಅನಿವಾರ್ಯ ಎನ್ನುವಂತಹ ವಾತಾವರಣವನ್ನು ಸೃಷ್ಟಿ ಮಾಡಿದ್ದು, ಆದರೇ ಯಾವಾಗ ಮೋದಿಯವರು ಅಧಿಕಾರಕ್ಕೆ ಬಂದ್ರೋ ಆವಾಗ ಯುವಕರ ಅರಿವಿಗೆ ಬಂತು ಈ ದೇಶ ಏನಾದ್ರೂ ಬಲಿಷ್ಠವಾಗುತ್ತಿದ್ರೆ, ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯುತ್ತಿದ್ರೆ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಹೊರತು ಮೋದಿಯವರಿಂದ ಆಗ್ಲಿ, ಬಿಜೆಪಿಯಿಂದ ಆಗ್ಲಿ ಸಾಧ್ಯವಿಲ್ಲ ಎನ್ನುವಂತಹ ಸತ್ಯದ ಅರಿವು ಯುವಕರಿಗೆ ಆಗಿದೆ ಎಂದರು.
ರಾಜ್ಯದ ಪರಿಸ್ಥಿತಿಯನ್ನು ನೋಡ್ತಾ ಇದ್ರೆ, ರಾಜ್ಯದಲ್ಲಿ ಪಠ್ಯ ಪುಸ್ತಕದ ಬದಲಾವಣೆಯ ವಿಚಾರ ಇರಬಹುದು, ಯಾರೋ ಒಬ್ಬರೂ ಫೇಸ್ ಬುಕ್ ಯೂನಿವರ್ಸಿಟಿಯ ಪ್ರಿನ್ಸಿಪಾಲ್ ರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ರೂ, ನಾರಾಯಣ ಗುರುಗಳ ಹೆಸರನ್ನು ತೆಗೆಯಲಾಯಿತು ಅದರ ಜೊತೆಗೆ ಗಡಿನಾಡಿನ ಬಲಿಷ್ಠವಾದಂತಹ ಧ್ವನಿಯಾಗಿದಂತಹ ಕೈಯಾರ ಕಿಂಜ್ಞಣ್ಣ ರೈ ರವರನ್ನ ಪಠ್ಯದಿಂದ ಹೊರಗಿಡಲು ಬಯಸಿದ್ರೂ, ಅಷ್ಟೇ ಅಲ್ಲದೇ ರಾಷ್ಟ್ರಕವಿ ಕುವೆಂಪು ರವರಿಗೆ ಅವಮಾನವನ್ನು ಮಾಡಿದ್ರೂ, ಹೀಗೆ ಅನೇಕ ರೀತಿಯಲ್ಲಿ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡಿದ್ದಾರೆ. ಹಿಂದುಳಿದ ವರ್ಗಕ್ಕೆ ಆದರ್ಶವಾಗಿರುವ ನಾರಾಯಣ ಗುರುಗಳಿಗೆ ಅಪಮಾನವಾಗುವಂತಹ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅವರು ಆರೋಪಿಸಿದರು.
ಸಣ್ಣ ಸಮಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮೂವರು ಜನ ಸೇರಿದರು ಪರವಾಗಿಲ್ಲ ನಾವೂ ಮಾತನಾಡಿಸಿ ತೆರಳುವುದಾಗಿ ಜಿಲ್ಲಾಧ್ಯಕ್ಷರು ತಿಳಿಸಿದ್ದು, ಆದರೇ ನನಗೆ ಅದು ಮನಸ್ಸಿಗೆ ಸಮಾಧಾನವೆನಿಸಲಿಲ್ಲ, ಯಾಕೆಂದರೆ ಪುತ್ತೂರಿಗೆ ಬರುವಾಗ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಬಂದಿರುತ್ತೀರಿ ಅಂತಹ ಸಂದರ್ಭದಲ್ಲಿ ಎಲ್ಲರನ್ನು ಒಟ್ಟು ಸೇರಿಸಬೇಕು ಎಂಬಂತಹ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನ ಎಲ್ಲಾರಿಂದಾಗಿ ನಾವು ಮಾಡಿದ್ದು, ಕೇವಲ ಒಂದು ಕರೆಗೆ ಪುತ್ತೂರಿನಲ್ಲಿ ನೂರು, ಇನ್ನೂರು ಜನರನ್ನ ಸೇರಿಸುವಷ್ಟು ಬಲಿಷ್ಠವಾಗಿ ಪುತ್ತೂರು ಯುವ ಕಾಂಗ್ರೆಸ್ ಬೆಳೆದಿದೆ. ವ್ಯಕ್ತಿಗಳು ಶಾಶ್ವತವಲ್ಲದ್ದಿದ್ದರೂ ಕೂಡ ಕಾಂಗ್ರೆಸ್ ಪಕ್ಷ ಮಾತ್ರ ಶಾಶ್ವತವಾಗಿ ಉಳಿಯಲಿದೆ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಮುಂಬರುವ ಎಂಟುವರೆ ತಿಂಗಳಲ್ಲಿ ನಾವು ಚುನಾವಣೆಯನ್ನು ಎದುರಿಸಲಿಕ್ಕಿದ್ದೇವೆ ಅದಕ್ಕಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಕೆಲವು ಕಾರ್ಯಕ್ರಮಗಳನ್ನು ನಮ್ಮ ಮುಂದಿಟ್ಟಿದ್ದೆ, ಅಂತಹ ಕಾರ್ಯಕ್ರಮದಲ್ಲಿ ಒಂದಾದಂತಹ ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮವನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಪೂರ್ಣ ದೇಶದಲ್ಲಿ ಈ ಕಾರ್ಯಕ್ರಮವನ್ನು ಎಲ್ಲಾ ಬೂತಿನೊಂದಿಗೆ ಎಲ್ಲಾ ಕಾರ್ಯಕ್ರಮವನ್ನು ದೇಶದಲ್ಲಿ ಮಾಡುತ್ತಿದೆ. ರಾಜ್ಯದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಕರ್ನಾಟಕದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಒಟ್ಟಿಗೆ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೇರಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಅಂತಾ ಹೇಳಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಏಳು ಜನರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ. ನಮ್ಮ ಝೋನ್ ಗೆ ಮಧ್ಯಪ್ರದೇಶದಿಂದ ವಿಜಯ್ ರವರನ್ನು ಕಳುಹಿಸಿಕೊಟ್ಟಿದ್ದು, ಇವರು ಪ್ರತಿ ತಿಂಗಳ ಐದು ದಿವಸ ದಕ್ಷಿಣ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಮಾಡಲಿದ್ದಾರೆ ಎಂದರು.
ಇನ್ನು ಆರು ತಿಂಗಳಲ್ಲಿ ಚುನಾವಣೆ ಇದ್ದು, ಯಾರಿಗೆ ಟಿಕೆಟ್ ನೀಡಲಿದ್ದಾರೆ ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡಲಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ನಮ್ಮ ಆದ್ಯತೆ ಯಾರಿಗೆ ಟಿಕೆಟ್ ನೀಡಿದರೂ ನಾವೂ ಕಾರ್ಯ ನಿರ್ವಹಿಸಬೇಕಾಗಿದೆ. ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ, ಪಕ್ಷದ ಸಿದ್ದಾಂತವನ್ನು ಒಪ್ಪಿಕೊಳ್ಳುವಂತಹ ಯುವಕರ ಪಡೆಯನ್ನು ಸೃಷ್ಟಿ ಮಾಡಿ ಪಕ್ಷಕ್ಕೆ ಗೆಲುವನ್ನು ತಂದು ಕೊಡಬೇಕಾದಂತಹ ಕಾರ್ಯವನ್ನು ಮಾಡಬೇಕಾಗಿದೆ. ಇಂತಹ ಕಾರ್ಯಕ್ರಮವನ್ನು ಎಲ್ಲರೂ ಜೊತೆ ಸೇರಿ, ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿ, ನಮ್ಮ ಸಂಘಟನೆಗೆ ಯಾವುದೇ ಅಡೆಚನೆಯಾಗದೆ, ಯೂತ್ ಸಂಘಟನೆಯ ಕೆಲಸ ಕಾರ್ಯಗಳಲ್ಲಿ ಎಲ್ಲರೂ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿ ಗ್ರಾಮಕ್ಕೆ ತೆರಳಿ ಯೂತ್ ಕಾಂಗ್ರೆಸ್ ಅನ್ನು ಜೋಡಿಸುವ ಕೆಲಸ ಕಾರ್ಯಗಳನ್ನು ನಾವು ನಿರ್ವಹಿಸಬೇಕಾಗಿದೆ ಎಂದರು.

ಬಳಿಕ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಪದಾಧಿಕಾರಿ ತೇಜಸ್ವಿ ಮಂಜ್ರೇಕರ್, ನಾನು ಏಳು ದಿನದಿಂದ ಕರ್ನಾಟಕದಲ್ಲಿ ಬೇರೆ ಬೇರೆ ವಿಧಾನಸಭೆ ಕ್ಷೇತ್ರ ತಿರುಗಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಎರಡು ಮಹತ್ವಪೂರ್ಣ ಯೋಜನೆ ಬಿಡುಗಡೆಗೊಳಿಸಲು ಸಿದ್ಧತೆಗೊಳಿಸುತ್ತಿದೆ. ಅದರ ಮೊದಲ ಯೋಜನೆ ಯುವಧ್ವನಿ, 2014 ರಲ್ಲಿ ಬಂದ ನರೇಂದ್ರ ಮೋದಿ 2 ಕೋಟಿ ಉದ್ಯೋಗ ತೆಗೆದುಕೊಡುವುದಾಗಿ ಭರವಸೆ ನೀಡಿದ್ದರು., ಆದರೇ 2022 ಆದರೂ ನಿರುದ್ಯೋಗ ಕಡಿಮೆ ಆಗಿಲ್ಲ ಮತ್ತು ಜಿಡಿಪಿ ದರ ಎರುತ್ತಲೇ ಹೋಗಿದೆ. ಈಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಯುವಕರಿಗೆ ಉದ್ಯೋಗ ದೊರಕುವ ಮೂಲಕ ಭಾರತದಲ್ಲಿ ಅಭಿವೃದ್ಧಿಯಾಗಬೇಕಿದೆ ಎಂದರು.

ಬಣ ರಾಜಕೀಯದಿಂದಾಗಿ ಯೂತ್ ಅಧ್ಯಕ್ಷರನ್ನು ಮೂಲೆಗುಂಪು ಮಾಡಲಾಗುತ್ತಿದೆ – ಕಮಲೇಶ್
ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಿದಾಗ ಕಮಲೇಶ್ ಮಾತನಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಯೂತ್ ಕಾಂಗ್ರೆಸ್ ಗೆ ಕೊಡುವಂತಹ ಪ್ರಾಮುಖ್ಯತೆ ಬಹಳ ಕಡಿಮೆಯಾಗುತ್ತಿದೆ. ಯಾಕೆಂದರೆ, ಯೂತ್ ಕಾಂಗ್ರೆಸ್ ನವರೂ ಮುಂಚೂಣಿಯಲ್ಲಿದ್ದರು. ಅವರಿಗೆ ಬ್ಲಾಕ್ ಕಾಂಗ್ರೆಸ್ ನ ಸಲಹೆ ಸಹಕಾರ ಮುಖ್ಯವಾಗಿದೆ. ಆದ್ರೇ ಕೆಲ ಮುಖಂಡರು ಕೆಲವು ಪದಾಧಿಕಾರಿಗಳನ್ನು ಹಿಡಿದಿತ್ತುಕೊಂಡು, ಯೂತ್ ಕಾಂಗ್ರೆಸ್ ನ ಕಾರ್ಯಕ್ರಮ ಹೋಗ್ಬೇಡ ಅಂತಾ ಹೇಳುವಂತಹ ಕೆಲಸಗಳು ನಡೆಯುತ್ತಿದೆ. ಎಲ್ಲಾ ಪದಾಧಿಕಾರಿಗಳಿಗೆ ಒಂದೇ ನಿಯಮವಿರಬೇಕು, ಬ್ಲಾಕ್ ಅಧ್ಯಕ್ಷರು ಕಾರ್ಯಕ್ರಮ ನಿರ್ಣಯ ಮಾಡಿದ್ದಾರೆಂದರೆ ಯಾವುದೇ ಬಣದ ಪದಾಧಿಕಾರಿಗಳಾದರೂ ನಿಯಮದಾನುಸಾರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಬೇರೆಯವರ ಗುಂಪುಗಾರಿಕೆಯಲ್ಲಿ ಯೂತ್ ಕಾಂಗ್ರೆಸ್ ನವರು ಭಾಗಿಗಳಾದರೆ ಅವರ ಕಟ್ಟುನಿಟ್ಟಿನ ಕ್ರಮದೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿದರು. ಅಲ್ಲದೆ ಬ್ಲಾಕ್ ಕಾಂಗ್ರೆಸ್ನ ಎಲ್ಲಾ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆಯವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಇನ್ನೂ ಕೆಲ ಯುವ ಕಾಂಗ್ರೆಸ್ ಕಾರ್ಯಕರ್ತರು ಪುತ್ತೂರು ಕಾಂಗ್ರೆಸ್ನಲ್ಲಿರುವ ಬಣ ರಾಜಕೀಯದ ಬಗ್ಗೆ ಅಳಲು ತೋಡಿಕೊಂಡರು.

ಇದೇ ಸಂದರ್ಭ ತಿಂಗಳ ಹಿಂದೆ ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಉಂಟಾದ ಗೊಂದಲದ ವಿಚಾರ ನೆನೆದು ಮಾತನಾಡಿದ ಶ್ರೀ ಪ್ರಸಾದ್, ಕಾರ್ಯಕ್ರಮ ಮಾಡದೆ ಕುಳಿತುಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಬೇಕಾದರೆ ಜವಾಬ್ದಾರಿಯನ್ನು ಬಿಟ್ಟು ಹೋಗುತ್ತೇನೆ, ಆದರೇ ಜವಾಬ್ದಾರಿಯಲ್ಲಿರುವಷ್ಟು ದಿನ ಕಾರ್ಯಕ್ರಮವನ್ನು ಮಾಡಿಯೇ ಮಾಡುತ್ತೇನೆ, ನನ್ನ ಉದ್ದೇಶ ಒಂದೇ ಕಾರ್ಯಕ್ರಮವನ್ನು ಮಾಡ್ಬೇಕು ಯುವಕರನ್ನು ಒಟ್ಟುಗೂಡಿಸಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಯಾಕೆಂದರೆ ಈ ಹಿಂದೆ ಅನೇಕ ಗೊಂದಲಗಳಾಗಿವೆ. ಆದಂತಹ ಗೊಂದಲಗಳನ್ನು ಮತ್ತೆ ಎಬ್ಬಿಸಲು ನಾನು ಇಷ್ಟಪಡುವುದಿಲ್ಲ. ಎಲ್ಲಾ ಪದಾಧಿಕಾರಿಗಳ ಸಹಕಾರ ಬೇಕಿದೆ. ಕಾರ್ಯಕ್ರಮಕ್ಕೆ ಬಂದು ಎಲ್ಲರು ಸಹಕಾರ ನೀಡಬೇಕು. ಒಂದು ಕಾರ್ಯಕ್ರಮ ಮಾಡಬೇಕಿದ್ದರೆ ಸುಮಾರು ಖರ್ಚಿದೆ ಯುವಕರನ್ನು ಸೇರಿಸಬೇಕಾಗುತ್ತದೆ ಒಂದಷ್ಟು ಶ್ರಮದ ಅಗತ್ಯವಿದೆ ಎಲ್ಲವನ್ನು ಒಂದುಗೂಡಿಸಿದ ತಕ್ಷಣ ಕಾರ್ಯಕ್ರಮದ ಬಗ್ಗೆ ಗೊಂದಲವಾದರೆ ತುಂಬಾ ಬೇಸರವಾಗುತ್ತದೆ ಎಂದು ಹೇಳಿದರು.
ಯೂತ್-ಬ್ಲಾಕ್ ಕಾಂಗ್ರೆಸ್ ನಡುವಿನ ಗೊಂದಲಕ್ಕೆ ಪರಿಹಾರ – ಲುಕ್ಮಾನ್
ಯೂತ್-ಬ್ಲಾಕ್ ಕಾಂಗ್ರೆಸ್ ನಡುವಿನ ಗೊಂದಲದ ಬಗ್ಗೆ ಮಾತನಾಡಿದ, ಲುಕ್ಮಾನ್ ಬಂಟ್ವಾಳ, ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ, ಯೂತ್ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ನಡುವೆ ಹೊಂದಾಣಿಕೆಯಿಲ್ಲ ಎಂದು ಮಂಗಳೂರಿನ ಬ್ಲಾಕ್ ಅಧ್ಯಕ್ಷರು ಹೇಳಿದ್ರು. ಯೂತ್ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಕರೆದರೆ ಅವರು ಬರುವುದಿಲ್ಲ, ಅವರು ಕರೆದರೆ ಇವರು ಹೋಗುವುದಿಲ್ಲ ಎಂಬ ಆರೋಪಗಳು ಬಂದಿವೆ ಮತ್ತೆ ಜಿಲ್ಲಾಧ್ಯಕ್ಷರು ಸಹ ಇದೆ ವಿಚಾರವನ್ನು ಹೇಳಿದರು, ಅದಕ್ಕಾಗಿ ನಾವೂ ಒಂದು ತೀರ್ಮಾನಕ್ಕೆ ಬಂದಿದ್ದೇವೆ, 16 ಬ್ಲಾಕ್ ಅಧ್ಯಕ್ಷರೂ, 16 ಯೂತ್ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷರೂ, ಜಿಲ್ಲಾಧ್ಯರು, ಎಂಎಲ್ ಸಿ ಎಲ್ಲಾ ಸೇರಿಕೊಂಡು ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸುವಂತಹ ತೀರ್ಮಾನವನ್ನು ಮಾಡಿದ್ದೇವೆ. ಅದರಲ್ಲಿ ಎಲ್ಲಾ ಚರ್ಚೆಯಾಗುತ್ತೆ, ನಂತರ ಎಲ್ಲಾ ಸರಿ ಹೋಗುತ್ತದೆ. ಚುನಾವಣೆ ಸಮಯ ಎಲ್ಲವೂ ಸರಿ ಹೋಗಲೇಬೇಕು. ಎಲ್ಲಿ ಈ ರೀತಿಯಾದಂತಹ ಸಮಸ್ಯೆಗಳಿದೆ ಅದರ ಬಗ್ಗೆ ನಾಯಕರ ಹತ್ತಿರ ಮಾತನಾಡಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚಿನ ಕೆಲಸ ಮಾಡುವಂತಹ ಸ್ವಾತಂತ್ರ್ಯವನ್ನು ನೀಡುವಂತಹ ಕಾರ್ಯವನ್ನು ಮಾಡಲಾಗುವುದು ಎಂದರು.
ಶೋಕಾಸ್ ನೋಟೀಸ್ ನೀಡಿದ ವಿಚಾರ ಚರ್ಚೆ:
ತಿಂಗಳ ಹಿಂದೆ ಯೂತ್ ಕಾಂಗ್ರೆಸ್ ಆಯೋಜಿಸಿದ್ದ ಹಸ್ತಲಾಘವ ಕಾರ್ಯಕ್ರಮದ ಬಗ್ಗೆ ಗೊಂದಲಗಳು ಉಂಟಾಗಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ್ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ರವರಿಗೆ ಶೋಕಾಸ್ ನೋಟೀಸ್ ನೀಡಿದ್ದರು. ಈ ಬಗ್ಗೆ ಶ್ರೀಪ್ರಸಾದ್ ನನಗೆ ಸೋಕಾಸ್ ನೀಡಿದ್ದೀರಿ, ಹೌದು ಆದರೆ ಪತ್ರಿಕಾ ಹೇಳಿಕೆ ನೀಡಿದ ಇತರ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಯಾಕೆ ನೋಟೀಸ್ ನೀಡಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಧ್ವನಿ ಗೂಡಿಸಿದರು. ಈ ಸಂದರ್ಭ ಪತ್ರಕೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದ ಲುಕ್ಮಾನ್ ಮಾತನ್ನು ಮುಂದುವರಿಸುತ್ತಾ ಮೀಡಿಯಾದವರು ಇರುವ ಕಾರಣ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಯಾರೊಬ್ಬರೂ ಸಭೆಯಲ್ಲಿ ಹಾಜರಿರಲಿಲ್ಲ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕ್ರಮ ನಡೆದಿದೆ ಅವರಿಗೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು ಆದರೂ ಯಾರೊಬ್ಬರೂ ಹಾಜರಾಗಿಲ್ಲ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಶೇಕ್ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ಫೈಜಲ್, ರಂಜಿತ್ ಬಂಗೇರ, ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

























