ಮಂಗಳೂರು: ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ತೀರ್ಪನ್ನ ಸ್ವೀಕರಿಸುತ್ತಿಲ್ಲ. ಹೈಕೋರ್ಟ್ ತೀರ್ಪಿನ ಬಳಿಕವೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಆಗಮಿಸುತ್ತಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡುತ್ತಿರಲಿಲ್ಲ. ಹಿಜಾಬ್ ವಿವಾದದ ಬೆನ್ನಲ್ಲೇ ಜಿಲ್ಲೆಯಲ್ಲಿ ಮುಸ್ಲಿಮರು ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ತೋರಿದ್ದಾರೆ. ದಕ್ಷಿಣ ಕನ್ನಡದಲ್ಲಿ 13 ಮುಸ್ಲಿಂ ಆಡಳಿತಗಳಿಂದ ಪಿಯು ಕಾಲೇಜು ಅನುಮತಿ ಕೋರಿ ಅರ್ಜಿ ಸಲ್ಲಿಸಿವೆ.
ಈ ಬಾರಿ ಜಿಲ್ಲೆಯಲ್ಲಿ ಕಾಲೇಜು ಸ್ಥಾಪಿಸಲು ಅನುಮತಿ ಕೋರಿ ಪಿಯು ಬೋರ್ಡ್ಗೆ ಸುಮಾರು 14 ಅರ್ಜಿಗಳು ಸಲ್ಲಿಕೆಯಾಗಿವೆ. 14 ಅರ್ಜಿಗಳ ಪೈಕಿ 13 ಅರ್ಜಿಗಳು ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದು. 14 ಅರ್ಜಿಗಳಲ್ಲಿ ಎರಡು ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ ಒಂದು ಗುರುಪುರದ ಮುಸ್ಲಿಂ ಶಿಕ್ಷಣ ಸಂಸ್ಥೆಗೆ ಮತ್ತು ಇನ್ನೊಂದು ಸುಬ್ರಹ್ಮಣ್ಯದ ಮುಸ್ಲಿಮೇತರ ಶಿಕ್ಷಣ ಸಂಸ್ಥೆಗೆ ಅನುಮತಿ ದೊರಕಿದೆ. ಉಳಿದ 12 ಮುಸ್ಲಿಂ ಆಡಳಿತದ ಕಾಲೇಜು ಸ್ಥಾಪನೆ ಅನುಮತಿ ಅರ್ಜಿಗಳು ಬಾಕಿ ಉಳಿದಿವೆ.

























