ಮಂಗಳೂರು: ನಗರದ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಹತ್ಯೆಗೂ ಯತ್ನಿಸಿರುವ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಬೈಕ್ನಲ್ಲಿ ಕಾರ್ಯಕರ್ತನನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದರು. ಮಾತ್ರವಲ್ಲದೆ, ದೂರವಾಣಿ ಮೂಲಕವೂ ಹಲವು ಬಾರಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 507ರ ಅನ್ವಯ ಎಫ್ಐಆರ್ ದಾಖಲಾಗಿದೆ.
ಮಂಗಳೂರಿನ ಬಜ್ಜೋಡಿ-ಬಿಕರ್ನಕಟ್ಟೆ ರಸ್ತೆಯಲ್ಲಿ ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಆಗಸ್ಟ್ 7ರಂದು ಕಾರಿಗೆ ಬೈಕ್ ತಾಗಿಸಿದ್ದರು. ಅದೇ ದಿನ ರಾತ್ರಿ 11.43ಕ್ಕೆ ಕಾರ್ಯಕರ್ತನಿಗೆ ಕರೆ ಮಾಡಿದ್ದ ಅವರು, ತುಳು ಮಿಶ್ರಿತ ಉರ್ದು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
‘ಇನಿ ತಪ್ಪಯ ಪಂಡ್ದ್ ಖುಷಿ ಮಲ್ಪೋಡ್ಚಿ, ಗೊತ್ತುಂಡು, ನನ್ನ ಮೂಜಿ ಜನ ಪಂಪುವೆಲ್ ಡ್ ಉಲ್ಲೆರತ್ತಾ, ಬುಡ್ಪುಜಿ ಯಾನ್, ಕರ್ತಿನ ಬೇನೆ ಉಂಡು’ (ಈ ದಿನ ತಪ್ಪಿಸಿದ್ದಿ ಎಂದು ಖುಷಿ ಪಡಬೇಡ, ಗೊತ್ತಿದೆ. ಇನ್ನೂ ಮೂರು ಜನ ಪಂಪ್ವೆಲ್ನಲ್ಲಿ ಇದ್ದಾರೆ. ನಾನು ಬಿಡುವುದಿಲ್ಲ. ಕೊಂದ ನೋವು ಇದೆ) ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.



























