ಬಂಟ್ವಾಳ: 2018 ರ ಜನವರಿ ತಿಂಗಳಿನಲ್ಲಿ ಬಂಟ್ವಾಳ ತಾಲೂಕು ಮೆಲ್ಕಾರ್ ಲಾಡ್ಜ್ ಮತ್ತು ಇರಾ ಗ್ರಾಮದಲ್ಲಿ ತಂದೆಯಿಂದಲೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆಯನ್ನು ನ್ಯಾಯಾಲಯವು ಅದೇಶಿಸಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪೊಲೀಸ್ ವೃತ್ತ ನಿರೀಕ್ಷಕರಾದ ಶರಣಗೌಡ ಹಾಗೂ ಟಿ. ಡಿ. ನಾಗರಾಜ್ ರವರು ತನಿಖೆ ನಡೆಸಿ ಆರೋಪಿಯಾದ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ದಾವೂದ್ (55) ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣವು ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಶೀಘ್ರಪಥ -2) ನ್ಯಾಯಾಲಯದಲ್ಲಿ ವಿಚಾರಣೆಗೊಂಡು ನ್ಯಾಯಾಧೀಶರಾದ ಕೆ. ಎಮ್. ರಾಧಾಕೃಷ್ಣ ರವರು ಆರೋಪಿತನಿಗೆ 15 ವರ್ಷಗಳ ಕಠಿಣ ಕಾರಗೃಹ ವಾಸ ಹಾಗೂ ರೂ. 25000/- ಜುಲ್ಮಾನೆ ಶಿಕ್ಷೆಯ ತೀರ್ಪು ಆದೇಶಿಸಿದ್ದಾರೆ.
ಪ್ರಕರಣದ ತನಿಖೆಯನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಅಧೀಕ್ಷಕರ ಮಾರ್ಗದರ್ಶನದಂತೆ ಪೊಲೀಸ್ ವೃತ್ತ ನಿರೀಕ್ಷಕರಾದ ಶರಣಗೌಡ ಮತ್ತು ಟಿ. ಡಿ. ನಾಗರಾಜ್ ರವರು ನಡೆಸಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾದ ವೆಂಕಟರಮಣ ಸ್ವಾಮಿ ರವರು ವಾದ ಮಂಡಿಸಿದ್ದರು. ಬಂಟ್ವಾಳ ಗ್ರಾಮಾಂತರ ಠಾಣಾ ಕೋರ್ಟ್ ಮಾನಿಟರಿಂಗ್ ಸೆಲ್ ನ ಪಿ.ಎಸ್.ಐ ಹರೀಶ್ ಮತ್ತು ಸಿಬ್ಬಂದಿಗಳು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸೂಕ್ತ ಸಮಯಕ್ಕೆ ಹಾಜರುಪಡಿಸಿದ್ದರು.