ಪುತ್ತೂರು: ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯಲ್ಲಿ ಪೋರ್ಜರಿ ಸಹಿ ಹಾಕಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಘಟನೆ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ನಿವಾಸಿಗಳಾದ ಕೊಪ್ಪಳ ಭಾಸ್ಕರ ರೈ, ಕತ್ತಿಬೈಲು ನಿವಾಸಿ ಜಯರಾಜ್ ಕೆ. ಮತ್ತು ಕತ್ತಿಬೈಲು ಕೆ.ಜಯರಾಮ ಗೌಡ ರವರು ಪ್ರತ್ಯೇಕವಾಗಿ ಪುತ್ತೂರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಮಾನ ಪಾಟಾಳಿ ಎಂಬವರ ಕುಟುಂಬದವರಾದ ಬೇಬಿ, ಲೋಕೇಶ್, ಅಚ್ಯುತ, ಹಾಗೂ ಕೇಶವ ರವರು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು.
ಮಾನ ಪಾಟಾಳಿ ಅವರ ಪತ್ನಿ ಬೇಬಿ, ಪುತ್ರರಾದ ಲೋಕೇಶ್, ಅಚ್ಚುತ ಮತ್ತು ಕೇಶವ ರವರು ಸಲ್ಲಿಸಿದ ಅರ್ಜಿಗೆ ನಡಾವಳಿಗಳಲ್ಲಿ ಪಂಚನಾಮೆಯ ಸಾಕ್ಷಿದಾರರಾಗಿ ಕೆ.ಜಯರಾಮ ಗೌಡ ಅವರ ಪೋರ್ಜರಿ ಸಹಿ ಬಳಸಲಾಗಿದೆ. ಬೇಬಿ, ಲೋಕೇಶ್ ಮತ್ತು ಅಚ್ಚುತ ಅವರ ಅರ್ಜಿಗೆ ಸಂಬಂಧಿಸಿ ಭಾಸ್ಕರ ರೈ ಅವರ ಫೋರ್ಜರಿ ಸಹಿ ಮಾಡಲಾಗಿದೆ. ಬೇಬಿ ಮತ್ತು ಲೋಕೇಶ್ ರವರ ಅರ್ಜಿಗೆ ಸಂಬಂಧಿಸಿದಂತೆ ಜಯರಾಜ ಕೆ. ರವರ ಫೋರ್ಜರಿ ಸಹಿ ಬಳಸಿ ಪೋರ್ಜರಿ ದಾಖಲೆ ಸೃಷ್ಟಿಸಿರುವುದಾಗಿ ಆರೋಪಿಸಿದ್ದಾರೆ.
ಅಕ್ರಮ ಸಕ್ರಮ ಅರ್ಜಿದಾರರು ನಮಗೆ ಪರಿಚಿತರಲ್ಲ. ಅದರಲ್ಲಿ ಹಾಕಿದ ಸಹಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಂದಾಯ ನಿರೀಕ್ಷಕ, ಗ್ರಾಮಕರಣಿಕ ಉಮೇಶ್ ಕಾವಡಿ ಹಾಗೂ ಉಗ್ರಾಣಿ ರಘುನಾಥ ಪಾಟಾಳಿ ದುರುದ್ದೇಶದಿಂದ ಈ ಅಕ್ರಮ ಸಕ್ರಮ ಅರ್ಜಿಯಲ್ಲಿ ನಮೂನಾ ವರದಿ ಮಾಡಿರುತ್ತಾರೆ. ಪಂಚನಾಮೆ ಮಾಡುವ ಸಂದರ್ಭ ಹಾಗೂ ತನಿಖಾ ವರದಿ ತಯಾರಿಸುವ ಸಂದರ್ಭ ನಾವು ಹಾಜರಿರಲಿಲ್ಲ. ಅಲ್ಲದೆ ಸಹಿಯನ್ನೂ ಮಾಡಿರುವುದಿಲ್ಲ. ಈ ಪೋರ್ಜರಿ ದಾಖಲೆ ಸೃಷ್ಟಿಯ ಹಿಂದೆ ಅನೇಕರ ಕೈವಾಡವಿದೆ ಆದ್ದರಿಂದ ಸದ್ರಿ ಅಕ್ರಮ ಸಕ್ರಮ ಅರ್ಜಿ/ಕಡತವನ್ನು ತರಿಸಿಕೊಂಡು ಸಂಬಂಧಿತ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಉಗ್ರಾಣಿ, ಗ್ರಾಮಕರಣಿಕರು, ಕಂದಾಯ ನಿರೀಕ್ಷಕರನ್ನು ಇಲಾಖಾ ತನಿಖೆ ಮಾಡಿ ಪೋರ್ಜರಿ ಸಹಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.