ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಏ.16 ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೆಶ್ವರ ದೇವಸ್ಥಾನಕ್ಕೆ ಆಗಮನವಾಯಿತು. ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯದಲ್ಲಿ ಸಾಲಾಗಿ ಭಕ್ತರು ಆರತಿ ನೆರವೇರಿಸಿದರು.
![](https://zoomintv.online/wp-content/uploads/2021/04/Untitled-1-copy-1024x576.jpg)
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆಯಿತು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು. ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ(ತೆಪ್ಪೋತ್ಸವ) ನಡೆಯಿತು. ಶ್ರೀ ದೇವರು ಕೆರೆಯ ಮಧ್ಯದಲ್ಲಿರುವ ಮಂಟಪದಲ್ಲಿ ಕುಳಿತು ಪೂಜೆ ಸ್ವೀಕರಿಸಿದ ಬಳಿಕ ದೇವಳದ ಒಳಗೆ ಹೋಗುವ ಕಾರ್ಯಕ್ರಮ ನಡೆಯಿತು.
![](https://zoomintv.online/wp-content/uploads/2021/04/WhatsApp-Image-2021-04-17-at-11.55.15-AM.jpeg)
ಮಲ್ಲಿಗೆ ಹೂವಿನ ವ್ಯಾಪಾರ : ‘ಮಲ್ಲಿಗೆ ಪ್ರಿಯೆ’ ಎಂದೇ ಖ್ಯಾತಿಯಾದ ಉಳ್ಳಾಲ್ತಿ ದೈವಕ್ಕೆ ಮಲ್ಲಿಗೆ ಹೂ ಅರ್ಪಿಸುವ ಸಲುವಾಗಿ ಬೆಳಿಗ್ಗೆಯಿಂದಲೇ ನಗರದ ರಸ್ತೆಗಳಲ್ಲಿ ಹೂವಿನ ವ್ಯಾಪಾರಿಗಳು ಮಲ್ಲಿಗೆ ವ್ಯಾಪಾರದಲ್ಲಿ ತೊಡಗಿಕೊಂಡರು. ರಸ್ತೆಯ ಇಕ್ಕೆಲೆಗಳು ಸೇರಿದಂತೆ ಆಸುಪಾಸಿನಲ್ಲಿ ನೂರಾರು ಮಲ್ಲಿಗೆ ಸ್ಟಾಲ್ಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.