ಪುತ್ತೂರು: ಕಾರು ಚಾಲಕನು ನಿರ್ಲಕ್ಷತನದಿಂದ ಚಾಲನೆ ಮಾಡಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಮಾಡ್ನೂರು ಗ್ರಾಮದ ಕಂಟ್ರಮಜಲು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ ಹೊಡೆದು ಗಾಯಗೊಂಡ ಕೊಳ್ತಿಗೆ ನಿವಾಸಿ ಗಂಗಾಧರ ಗೌಡ ರವರ ಪುತ್ರ ವಿನುತ್ ನೀಡಿದ ದೂರಿನ ಮೇರೆಗೆ ಅಪರಿಚಿತ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿನುತ್ ರವರು ಫೆ.26 ರಂದು ತನ್ನ ಮನೆಯಿಂದ ಕಾವು ಎಂಬಲ್ಲಿಗೆ ತೆರಳುವರೇ ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಂಟ್ರಮಜಲು ಎಂಬಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಅವರ ತಂದೆ ಗಂಗಾಧರ ಗೌಡರು ಸ್ಕೂಟರಿನಲ್ಲಿ ತಾಯಿ ಹೇಮಲತಾರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಮೈಸೂರು –ಮಾಣಿ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಾ ವಿನುತ್ ರವರು ಕಂಟ್ರಮಜಲು ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬಿಳಿ ಬಣ್ಣದ ಬೆಂಝ್ ಕಾರೊಂದನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಂಗಾಧರ ಗೌಡರು ಸವಾರಿ ಮಾಡಿಕೊಂಡಿದ್ದ ಸ್ಕೂಟರನ್ನು ಓವರ್ಟೇಕ್ ಮಾಡುತ್ತಾ ಸದ್ರಿ ಸ್ಕೂಟರಿಗೆ ಡಿಕ್ಕಿಯುಂಟು ಮಾಡಿರುತ್ತಾನೆ.
ಅಪಘಾತ ಉಂಟು ಮಾಡಿದ ಕಾರನ್ನು ಅದರ ಚಾಲಕನು ನಿಲ್ಲಿಸದೇ ಪುತ್ತೂರು ಕಡೆಗೆ ಪರಾರಿಯಾಗಿದ್ದು, ಅಪಘಾತ ಮಾಡಿ ಗಾಯಗೊಂಡವರನ್ನು ಆಸ್ಪತ್ರೆಗೂ ದಾಖಲಿಸದೆ ಪರಾರಿಯಾದ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲಂ 279, 337 ಐ ಪಿ ಸಿ. IMV ACT,1988 (U/s:134(a&b)) ರಂತೆ ಪ್ರಕರಣ ದಾಖಲಾಗಿದೆ…


























