ತುಮಕೂರು: ಉಡುಪಿ ಕೃಷ್ಣ ಮಠದ ಜಾಗವನ್ನ ಮುಸ್ಲಿಂ ರಾಜರು ಕೊಟ್ಟಿದ್ದು ಎಂದು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಉಡುಪಿ ಕೃಷ್ಣ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು, ‘ಯಾರೇ, ಯಾವ ಹೇಳಿಕೆಯನ್ನ ಕೂಡ ಕೊಡಬಹುದು. ಆದ್ರೆ ಅಂತಹ ಹೇಳಿಕೆಯನ್ನ ಕೊಡಬೇಕು ಅಂತಾದ್ರೆ, ಅದಕ್ಕೆ ಸೂಕ್ತವಾದ ಆಧಾರವನ್ನ ಕೊಟ್ರೆ ಆ ಮಾತಿಗೆ ಬೆಲೆ ಇರುತ್ತೆ. ಆಧಾರ ರಹಿತವಾಗಿ ಏನು ಬೇಕಾದ್ರೂ ಹೇಳಬಹುದು. ಹೇಳಿಕೆ ಕೊಟ್ಟವರನ್ನ ಯಾಕೆ ಕೊಟ್ಟಿದ್ದೀರಿ ಅಂತಾ ಕೇಳ್ಬೇಕು. ಆಧಾರ ರಹಿತವಾದ ಮಾತನ್ನ ಇಡ್ಕೊಂಡು ಚರ್ಚೆ ಬೆಳೆಸ್ತಾರೆ ಅಂತಾದ್ರೆ ಅದಕ್ಕೆ ಅರ್ಥವಿಲ್ಲ’ ಎಂದು ಹೇಳಿದ್ದಾರೆ.
ಉಡುಪಿಯ ಅನಂತೇಶ್ವರ ಸನ್ನಿಧಾನ ಇರಬಹುದು, ಕೃಷ್ಣ ಮಠದ ಸನ್ನಿಧಾನ ಇರಬಹುದು ರಾಮಭೋಜ ಎಂಬ ಅರಸ ನೀಡಿರೋದಕ್ಕೆ ಆಧಾರಗಳಿವೆ. ಹಾಗಿರುವಾಗ ಅದು ನಮಗೆ ಅದು ರಾಮಭೋಜ ಕೊಟ್ಟಿರುವಂತದ್ದು. ಗುರುಗಳ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅದು ಇಲ್ಲಿ ಅಲ್ಲ, ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ರು. ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನ ದಾಟ ಬೇಕಿತ್ತು. ಅಲ್ಲೊಬ್ಬ ತುರ್ಕರ ರಾಜ ಆಳ್ವಿಕೆ ಮಾಡ್ತಿದ್ದ. ನದಿ ದಾಟಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಆತ ನಿಲ್ಲಿಸಿದ್ದ. ಆಗ ಮಧ್ವಾಚಾರ್ಯರು ಗಂಗಾ ನದಿಯನ್ನ ಈಜಿಯೇ ದಾಟಲು ಮುಂದಾದರು. ಶಿಷ್ಯರಿಗೆ ತಮ್ಮ ಕಾಲನ್ನ ಹಿಡಿದುಕೊಳ್ಳಲು ಹೇಳಿದರು. ಆಗ ತುರ್ಕ ರಾಜನ ಸೈನಿಕರು ಇವರತ್ತ ಓಡಿಬಂದರು. ಆದ್ರೆ ಮಧ್ವಾಚಾರ್ಯರು ಸ್ವಲ್ಪವೂ ಹೆದರದೇ ಅವರಿಗೆ ತಿಳಿಹೇಳಿದರು. ಆಗ ಆಚಾರ್ಯರ ವ್ಯಕ್ತಿತ್ವವನ್ನ ಕಂಡು ಆ ರಾಜ ಅಲ್ಲಿನ ಅರ್ಧ ರಾಜ್ಯವನ್ನ ದಾನ ಮಾಡುತ್ತಾನೆ. ಅದನ್ನ ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆ ಹೊರತು, ಉಡುಪಿ ಮಠದ ಜಾಗವನ್ನ ಮುಸ್ಲಿಂ ರಾಜರು ನೀಡಿದ್ದು, ಅಂತಾ ಹೇಳಿದ್ದಲ್ಲ ಎಂದು ಹೇಳಿದ್ದಾರೆ.
ಮಿಥುನ್ ರೈ ಅವರು ಗೊಂದಲದಿಂದ ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಆದರೆ ಅದು ಆಧಾರ ರಹಿತವಾಗಿರೋದ್ರಿಂದ ಈ ಚರ್ಚೆಯನ್ನ ಮುಂದುವರಿಸೋದು ಅರ್ಥಹೀನ ಅನ್ನೋದು ನನ್ನ ಅನಿಸಿಕೆ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ..