ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ.) ಟ್ರಸ್ಟ್ ಹಾಗೂ ಊರ ಪರವೂರ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಿಸಿರುವ “ಶ್ರೀ ನಿಟಿಲಾಕ್ಷ ಸದಾಶಿವ ಮಹಾದ್ವಾರ” ದ ಲೋಕಾರ್ಪಣೆ ಕಾರ್ಯಕ್ರಮವು ಮಾ.14 ರಂದು ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ರವರು ಮಹಾದ್ವಾರವನ್ನು ದೀಪ ಬೆಳಗಸಿ ಹಾಗೂ ತೆಂಗಿನಕಾಯಿ ಒಡೆಯುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಶಾಸಕರ ಅನುದಾನದಲ್ಲಿ ನೆಟ್ಲ ದ್ವಾರದಿಂದ ನಿಟಿಲಾಪುರ ದೇವಾಲಯದವರೆಗೆ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆಯನ್ನೂ ಸಾಂಕೇತಿಕವಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರವರು ಉದ್ಘಾಟಿಸಿದರು.

24 ವರ್ಷಗಳ ಹಿಂದೆ (14-03-1999) ಉದ್ಘಾಟನೆಯಾಗಿದ್ದ ಹಿಂದಿನ ಮಹಾದ್ವಾರವೂ ಶಿವಶಕ್ತಿ ಬ್ರದರ್ಸ್ ನೇತೃತ್ವದಲ್ಲಿ ಇದೀಗ ಸಂಘಟನೆಗೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಹಳೆದ್ವಾರವನ್ನು ಕೆಡವಿ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಹೊಸ ದ್ವಾರವನ್ನು ನಿರ್ಮಿಸಲಾಗಿದೆ. ನಂತರ ನಿಟಿಲಾಪುರ ದೇವಾಲಯದ ಬಳಿ ಶಿವಶಕ್ತಿ ಬ್ರದರ್ಸ್ ನಿಟಿಲಾಪುರ (ರಿ.) ಟ್ರಸ್ಟ್ ಹಾಗೂ ಊರ ಭಕ್ತಾದಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ ಕಾಣಿಕೆಹುಂಡಿಯನ್ನೂ ದೇವಳಕ್ಕೆ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಕಾರ್ಯಕಾರಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ಕುಲಾಲ್ ಹಾಗೂ ಮೋನಪ್ಪ ದೇವಸ್ಯ ಶಿವಶಕ್ತಿ ಬ್ರದರ್ಸ್ ಇದರ ಅಧ್ಯಕ್ಷರಾದ ಮನೋಜ್ ಗಟ್ಟಿ ನೆಟ್ಲ ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.


