ಬಂಟ್ವಾಳ/ಉಡುಪಿ: ದೇಶದ ಬುಡಕಟ್ಟು ಜನಾಂಗದ ಸ್ವಸಹಾಯ ಗುಂಪುಗಳ ಸದಸ್ಯರು ಮಾ. 31ರಂದು ರಾಷ್ಟ್ರಪತಿ ಭವನದ ಅಮೃತ ಉದ್ಯಾನದಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ಸಂವಾದ ನಡೆಸಲಿದ್ದು, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ತಲಾ ಮೂವರು ಮಹಿಳೆಯರು ಭಾಗವಹಿಸುತ್ತಿದ್ದಾರೆ. ಇವರು ಸ್ವ ಉದ್ಯೋಗದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ.
ವಿಟ್ಲದ ಅಳಿಕೆ ಅನುಗ್ರಹ ಒಕ್ಕೂಟದ ವಾರಿಜಾ, ಅಮಿತಾ ಅವರು ಕನ್ಯಾನ ಕೆಪಿಎಸ್ ವಿದ್ಯಾಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದು, ಅಣಬೆ ಕೃಷಿ, ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇಂದ್ರಾವತಿ ಅವರು ಹಪ್ಪಳ, ಸಂಡಿಗೆ ತಯಾರಿಸಿ ಮಾರುವ ಜೊತೆಗೆ ಟೈಲರಿಂಗ್ ವೃತ್ತಿಯನ್ನೂ ನಿರ್ವಹಿಸುತ್ತಿದ್ದಾರೆ.
ಉಡುಪಿ, ಬ್ರಹ್ಮಾವರ ತಾಲೂಕಿನ ಸ್ವಾಮಿ ಕೊರಗಜ್ಜ ಸಂಜೀವಿನಿ ಸಂಘದ ಸದಸ್ಯರಾದ ಅನಿತಾ ಎಸ್., ಬೈಂದೂರು ತಾಲೂಕಿನ ದುರ್ಗಾಶ್ರೀ ಸಂಜೀವಿನಿ ಸಂಘದ ಸದಸ್ಯರಾದ ಗಿರಿಜಾ, ಗೀತಾ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.