ಸುಳ್ಯ: ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರ ಕುರಿತು ನಿಂದನಾತ್ಮಕ ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಮೇ.24 ರಂದು ತಡರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗದ ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಸುಳ್ಯ ಜಯನಗರದಲ್ಲಿರುವ ಪ್ರಮೀತ್ ರವರ ನಿವಾಸಕ್ಕೆ ತೆರಳಿ ಫೇಸ್ಬುಕ್ ನಿಂದ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ಇತ್ತ ಈ ವಿಷಯ ತಿಳಿದ ಸುಳ್ಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಎರಡು ಕಡೆಯವರನ್ನು ಸುಳ್ಯ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ ಬಗ್ಗೆ ವರದಿಯಾಗಿದೆ.

ಫೇಸ್ಟುಕ್ ನಲ್ಲಿ ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಬರಹವನ್ನು ನೋಡಿದ ಶಾಸಕರ ಅಭಿಮಾನಿ ಬಳಗದ ಯುವಕರು ಬರೆದ ವ್ಯಕ್ತಿಯನ್ನು ಕಂಡುಹಿಡಿದು ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೂಡಲೇ ಅದನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮೀತ್ ಅವರು ನಾನು ಅದನ್ನು ಡಿಲೀಟ್ ಮಾಡುವುದಿಲ್ಲ ಎಂದು ಹೇಳಿರುವುದಾಗಿಯೂ ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ಪ್ರಮಿತ್ ರವರು ಯುವಕರನ್ನು ಧೈರ್ಯವಿದ್ದರೆ ಸುಳ್ಯದ ಜಯನಗರಕ್ಕೆ ಬರಲು ಹೇಳಿದ್ದಾರೆಂದು, ಕರೆಯನ್ನು ಸ್ವೀಕರಿಸಿದ ಪುತ್ತೂರಿನ ಯುವಕರ ತಂಡ ಮಂದಿ ಜಯನಗರದ ಪ್ರಮೀತ್ ರವರ ಮನೆಗೆ ಬಂದಿದ್ದಾರೆನ್ನಲಾಗಿದೆ.
ಹುಡುಕಿ ಪುತ್ತೂರಿನಿಂದ ಬಂದ ಯುವಕರು ಪ್ರಮಿತ್ ರವರ ಮನೆಗೆ ತೆರಳಿ ಕೂಡಲೆ ನಮ್ಮ ನಾಯಕರಾದ ಅಶೋಕ್ ರೈ ಅವರ ಬಳಿ ಕ್ಷಮೆ ಯಾಚಿಸಬೇಕು ಮತ್ತು ಫೇಸ್ಬುಕ್ ನಲ್ಲಿ ಹಾಕಿರುವಂತಹ ಪೋಸ್ಟರ್ ಅನ್ನು ಡಿಲೀಟ್ ಮಾಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಮೀತ್ ರವರು ಅದನ್ನು ಒಪ್ಪಲಿಲ್ಲವೆಂದು ವಿಷಯ ವಿಕೋಪಕ್ಕೆ ತೆರಳಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಘಟನೆ ತಿಳಿದ ಸ್ಥಳೀಯ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು.
ಈ ವೇಳೆ ಮಾಹಿತಿ ತಿಳಿದ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ಶಾಹಿದ್ ಅಫ್ರಿದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಜನರ ಗುಂಪನ್ನು ಚದುರಿಸಿ ಪುತ್ತೂರಿನಿಂದ ಬಂದಿದ್ದ ಯುವಕರನ್ನು ಮತ್ತು ಪ್ರಮೀತ್ ರನ್ನು ಸುಳ್ಯ ಠಾಣೆಗೆ ಕರೆದೊಯ್ದಿದ್ದಾರೆ.
ಘಟನೆಯ ವಿವರವನ್ನು ಪಡೆದಿದ್ದ ಪುತ್ತೂರು ವಿಭಾಗದ ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ರವರು ಕೂಡಲೇ ಸುಳ್ಯ ಠಾಣೆಗೆ ಬಂದಿದ್ದು ಎರಡು ತಂಡದವರನ್ನು ವಿಚಾರಣೆ ನಡೆಸಿದ್ದು, ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಿ ಕಳುಹಿಸಿ ಕೊಟ್ಟಿರುವುದಾಗಿ ತಿಳಿದುಬಂದಿದೆ.