ಸುಬ್ರಹ್ಮಣ್ಯ : ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಕಾಡಾನೆಯೊಂದು ದಂತದಿಂದ ತಿವಿದು ದಾಳಿ ಮಾಡಿದ ಹಿನ್ನಲೆಯಲ್ಲಿ ಕೆಲಹೊತ್ತು ಆತಂಕ ಸೃಷ್ಟಿಯಾದ ಘಟನೆ ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಜೂ.1 ರಂದು ರಾತ್ರಿ ನಡೆದಿದೆ.

ಸ್ಲೀಪರ್ ಕೋಚ್ ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದಾಗ ಕೆಂಜಾಳ ಸಮೀಪದ ಅನಿಲ ಎಂಬ ರಸ್ತೆಯಲ್ಲಿ ಕಾಡಾನೆ ನಿಂತಿದ್ದು, ಇದನ್ನು ನೋಡಿ ತಪ್ಪಿಸಲು ಯತ್ನಿಸಿದ್ದಾರೆ.
ಈ ವೇಳೆ ಆನೆಯು ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಬಸ್ಸಿಗೆ ಹಾನಿಯಾಗಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಘಟನೆಯ ಬಳಿಕ ಬಸ್ ನಸುಕಿನ ವೇಳೆ ಬೆಂಗಳೂರು ಕಡೆ ಪ್ರಯಾಣಿಸಿದೆ.