ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೆ.6 ರಂದು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿನ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ತಾಲೂಕು ಯಾದವ ಸಭಾ ಅಧ್ಯಕ್ಷರು ಸಭೆಯಲ್ಲಿ ಆಸೀನರಾಗಿದ್ದರೂ ಅವರನ್ನು ವೇದಿಕೆಗೆ ಕರೆಯಲಾಗಿಲ್ಲ ಎಂದು ಸಂಘಟಕರ ವಿರುದ್ಧ ಆಕ್ಷೇಪ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತರಲಾಗಿದ್ದು, ಲಿಖಿತವಾಗಿ ನೀಡುವಂತೆ ಅವರು ಸೂಚಿಸಿರುವುದಾಗಿ ತಿಳಿದು ಬಂದಿದೆ.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಸಹಾಯಕ ಕಮಿಷನರ್ ಗಿರೀಶ್ ನಂದನ್ ಎಂ. ಅವರು ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದರು.
ಮುಖ್ಯ ಅತಿಥಿಯಾಗಿ ತಾಲೂಕು ಗೊಲ್ಲ (ಯಾದವ) ಸಂಘದ ಅಧ್ಯಕ್ಷ ಇ.ಎಸ್. ವಾಸುದೇವ ಉಪಸ್ಥಿತರಿದ್ದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿಯವರು ಸಂಸ್ಮರಣಾ ಉಪನ್ಯಾಸ ನೀಡಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಶಿವಶಂಕರ್ ಜೆ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಕಚೇರಿ ಶಿರಸ್ತೇದಾರ್ ಕವಿತಾ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಸ್ವಾಗತಿಸಿ, ವಂದಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿ, ಆಮಂತ್ರಣ ಪತ್ರದಲ್ಲಿ ಹೆಸರು ಮುದ್ರಿತವಾಗಿದ್ದ ತಾಲೂಕು ಯಾದವ ಸಭಾ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರೂ ಅವರನ್ನು ವೇದಿಕೆಗೆ ಕರೆದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಸಭೆಯ ಕೊನೆಯ ತನಕವೂ ಆಸೀನರಾಗಿದ್ದ ಶ್ರೀಪ್ರಸಾದ್ ಪಾಣಾಜೆ ಅವರು ಸಭೆ ಮುಗಿದ ಬಳಿಕ, ತನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಿದರೂ ವೇದಿಕೆಗೆ ಕರೆಯದೆ ಕಡೆಗಣಿಸಿರುವ ಕುರಿತು ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರಲ್ಲಿ ಪ್ರಶ್ನಿಸಿದರು.
ಈ ಕುರಿತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅವರಲ್ಲಿ ವಿಚಾರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನೀವು ರೈಟಿಂಗ್ ನಲ್ಲಿ ಕೊಡಿ ಎಂದು ಸಹಾಯಕ ಆಯುಕ್ತರು ತಿಳಿಸಿದರೆಂದು ತಿಳಿದು ಬಂದಿದೆ.
ತಹಶೀಲ್ದಾರ್ ಅವರು ಶ್ರೀಪ್ರಸಾದ್ ರವರೊಂದಿಗೆ ಮಾತುಕತೆ ನಡೆಸಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು ಎಂದು ತಿಳಿದು ಬಂದಿದೆ.
ಗೊಂದಲ ಕುರಿತು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಪ್ರತಿಕ್ರಿಯೆ ನೀಡಿದ್ದು, ತಾಲೂಕು ಯಾದವ ಸಭಾದ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೇ ಅವರು ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಬಂದಿದ್ದರಿಂದ ವೇದಿಕೆಗೆ ಆಹ್ವಾನಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಈ ಬಗ್ಗೆ ತಾಲೂಕು ಯಾದವ ಸಭಾ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಪ್ರತಿಕ್ರಿಯಿಸಿದ್ದು, ಪುತ್ತೂರಿನಲ್ಲಿ ಯಾದವ ಸಭಾದ ಜನರು ಸುಮಾರು 3 ಸಾವಿರ ಮಂದಿ ಇದ್ದಾರೆ. 2014-15ರಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಾರ್ವಜನಿಕವಾಗಿ ಆಚರಿಸಬೇಕೆಂದು ಮತ್ತು ಯಾದವ ಸಭಾದ ಸಲಹೆ ಸೂಚನೆ ಪಡೆಯಬೇಕೆಂದು ಸರಕಾರಿ ಸುತ್ತೋಲೆ ಇದೆ. ಆದರೆ ಇಷ್ಟು ವರ್ಷ ಯಾದವ ಸಮಾಜದ ನಮ್ಮನ್ನು ಕರೆಯುತ್ತಿರಲಿಲ್ಲ. ಅದಲ್ಲದೆ ಸುಮಾರು 25 ಸಾವಿರ ರೂ. ಕಾರ್ಯಕ್ರಮಕ್ಕೆಂದು ಬರುತ್ತದೆ.
ಈ ಬಾರಿ ನನ್ನನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು. ನಾನು ಬೆಳಿಗ್ಗೆ ಪಾಣಾಜೆಯಲ್ಲಿ ಶಾಸಕರೊಂದಿಗೆ ಯಾದವ ಸಭಾ ಕಾರ್ಯಕ್ರಮ ಮುಗಿಸಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಕಾರ್ಯಕ್ರಮಕ್ಕೆ ಹೋಗಿದ್ದೆ., ಅಲ್ಲಿ ನಾನು ಹೋಗುವಾಗ ಸ್ವಾಗತ ಕಾರ್ಯಕ್ರಮ ಆಗಿತ್ತು. ದೀಪ ಪ್ರಜ್ವಲನೆ ಆಗಿರಲಿಲ್ಲ., ದೀಪ ಪ್ರಜ್ವಲನೆ ಸಮಯ ನಾನು ಒಳಗೆ ಸಭೆಯಲ್ಲಿ ಕೂತಿದ್ದೆ ಆದರೆ ನನ್ನನ್ನು ಅವರು ವೇದಿಕೆ ಕರೆದಿಲ್ಲ., ಕಾರ್ಯಕ್ರಮದ ಅತಿಥಿಯಾಗಿ ಕರೆದ ಬಳಿಕ ಸ್ವಾಗತ ಮಾಡಿ ಗುರುತಿಸಬೇಕಾಗಿತ್ತು. ಜಿಲ್ಲೆಯಲ್ಲಿ ಮತ್ತು ಸುಳ್ಯದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ನಮ್ಮ ಯಾದವ ಸಭಾ ಅಧ್ಯಕ್ಷರನ್ನು ವೇದಿಕೆಗೆ ಕರೆದಿದ್ದಾರೆ.
ಪುತ್ತೂರಿನಲ್ಲಿ ಮಾತ್ರ ಕರೆದಿಲ್ಲ ಹಾಗಾಗಿ ಸಭೆ ಮುಗಿದ ಬಳಿಕ ಸಹಾಯಕ ಕಮಿಷನರ್ ಅವರನ್ನು ಪ್ರಶ್ನೆ ಮಾಡಿದ್ದೇನೆ. ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯೊಂದಿಗೆ ಮಾತುಕತೆ ಮಾಡಿ ರೈಟಿಂಗ್ನಲ್ಲಿ ಕೊಡಿ ಎಂದು ತಿಳಿಸಿದ್ದಾರೆಂದು ಅವರು ತಿಳಿಸಿದ್ದಾರೆ.

























