ಬೆಳ್ತಂಗಡಿ : ತಾಲೂಕಿನ ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವು ಕಾರಿಗೆ ಹಾನಿ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಾಯಗೊಂಡಿದ್ದ ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್ ರೆಹಮಾನ್ (40) ಹಾಗೂ ನೆರಿಯ ಗ್ರಾಮದ ಇಟ್ಟಾಡಿ ಮನೆಯ ನಾಸಿಯಾ (30) ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಒಂದು ವರ್ಷದ ಮಗು ಫಾತಿಮಾ ಅಲ್ಫಾ ಕಾಲಿನ ಮೂಳೆಯಲ್ಲಿ ಸ್ವಲ್ಪ ಮಟ್ಟಿನ ಬಿರುಕು ಕಂಡಿದ್ದರಿಂದ ವೈದ್ಯರ ಸಲಹೆಯಂತೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
![](https://zoomintv.online/wp-content/uploads/2023/11/WhatsApp-Image-2023-11-29-at-9.56.07-AM.jpeg)
ಉಳಿದಂತೆ ಕಾರಿನಲ್ಲಿದ್ದ ರೆಹಮಾನ್ ಪತ್ನಿ ಫೌಸಿಯಾ (35), ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಅಯಿಷಾ ವಾಫಾ (4), ರೆಹಮಾನ್ ಮಗಳು ಮಹಮ್ಮದ್ ಮೋಹಜ್ (4) ಪಾರಾಗಿದ್ದಾರೆ.
ಕಾರಿನಲ್ಲಿ ಮೂವರು ಮಕ್ಕಳು ಸೇರಿ ಒಟ್ಟು 8 ಮಂದಿಯಿದ್ದರು.
ಗಾಯಾಳು ರೆಹಮಾನ್ ಮತ್ತು ಪತ್ನಿ ಫೌಸಿಯಾ ಅವರು ಅತ್ತೆ ಮನೆಯಾದ ನೆರಿಯಾ ಗ್ರಾಮದ ಇಟ್ಟಾಡಿ ನಿವಾಸಿ ನೆಬಿಸಾ ಅವರ ಮನೆಗೆ ಮಗುವಿನೊಂದಿಗೆ ಸೋಮವಾರ ಬರುವವರಿದ್ದರು. ನೆರಿಯದಲ್ಲಿ ದಾರಿ ಮಧ್ಯೆ ಸಂಬಂಧಿಕರು ಸಿಕ್ಕಿದ್ದರಿಂದ ಜೊತೆಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ ಬಯಲು ಬಸದಿ ಸಮೀಪ ಒಂಟಿ ಸಲಗ ಎದುರಾಯಿತು. ತತ್ಕ್ಷಣ ಕಾರು ನಿಲ್ಲಿಸಿ ಹಿಂಬಾಗಿಲಿನಿಂದ ಇಬ್ಬರು ಕಾರಿನಿಂದ ಇಳಿಯುತ್ತಿದ್ದಂತೆ ಆನೆ ಕಾರಿನ ಮೇಲೆ ದಾಳಿ ನಡೆಸಿ, ದಾಡೆಯಿಂದ ತಿವಿದು, ಎತ್ತಿ ಮಗುಚಲು ನೋಡಿತು. ಆ ವೇಳೆ ಕಾರಿನಲ್ಲಿದ್ದವರಿಗೆ ಗಾಯವಾಗಿದೆ.