ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ಸಾವಿಗೆ ಶರಣಾಗಿರುವ ಘಟನೆ ಯಲಹಂಕದ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಡೆದಿದೆ.
ಮೃತರನ್ನು 38 ವರ್ಷದ ಅವಿನಾಶ್, ಪತ್ನಿ ಮಮತಾ (30) ಮಗಳಾದ ಅಧೀರಾ (5), ಅಣ್ಣಯ್ಯ ಎರಡೂವರೆ ವರ್ಷದ ಮಗು ಎಂದು ಗುರುತಿಸಲಾಗಿದೆ. ಮೊದಲಿಗೆ ಮಕ್ಕಳನ್ನು ಸಾಯಿಸಿದ ತಾಯಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಕಲಬುರ್ಗಿ ಮೂಲದ ಅವಿನಾಶ್ ಬೆಂಗಳೂರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಮನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ರಾಜಾನುಕುಂಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಮಕ್ಕಳನ್ನು ತಾಯಿಯೇ ಕತ್ತು ಹಿಸುಕಿ ಸಾಯಿಸಿದ್ದಾರೆ ಎನ್ನಲಾಗಿದೆ. ಮನೆಗೆ ಬಂದ ಗಂಡ ಅವಿನಾಶ್, ಹೆಂಡತಿ ಇಬ್ಬರು ಮಕ್ಕಳು ಜೀವ ಬಿಟ್ಟಿರೋದನ್ನ ನೋಡಿದ್ದಾರೆ. ಅನಂತರ ಆತನೂ ಕೂಡ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಅವಿನಾಶ್, ಮಮತಾ ದಂಪತಿಯ ಈ ದುರಂತ ಸಾವಿಗೆ ಹಣಕಾಸಿನ ಸಮಸ್ಯೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಗಂಡನ ಆರ್ಥಿಕ ಸಂಕಷ್ಟದಿಂದ ಪತ್ನಿ ಈ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ. ನಿನ್ನೆ ಸಂಜೆ ಹಲವು ಬಾರಿ ಕರೆ ಮಾಡಿದ್ರು ಮಮತಾ ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಅವಿನಾಶ್ ಹೇಳಿದ್ದಾರೆ. ಮೇಲಿನ ಮನೆಯವರು ಹಲವು ಬಾರಿ ಬಾಗಿಲು ಬಡಿದ್ರು ಬಾಗಿಲು ತೆಗೆದಿಲ್ಲ. ರಾತ್ರಿ ಗಂಡ ಮನೆಗೆ ವಾಪಸ್ ಬಂದಿದ್ದಾರೆ.
ಮತ್ತೊಂದು ಮನೆ ಕೀನಿಂದ ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನ ಸಾಯಿಸಿ ಪತ್ನಿ ಸಾವಿಗೆ ಶರಣಾಗಿರುವುದು ಪತ್ತೆಯಾಗಿದೆ. ಪತ್ನಿ, ಮಕ್ಕಳ ಸಾವು ಕಂಡು ಬೆಚ್ಚಿಬಿದ್ದಿದ್ದ ಗಂಡ ಅವಿನಾಶ್, ನಂತರ ಪತ್ನಿ ಮೃತದೇಹ ತೆಗೆದು ಅದೇ ಹಗ್ಗಕ್ಕೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.