ಕಾಂತಾರ ಸಿನಿಮಾ ತುಳುನಾಡಿನ ದೈವ ಶಕ್ತಿಯನ್ನ ಇಡೀ ಜಗತ್ತಿಗೆ ಸಾರಿದ್ದೇ ಸಾರಿದ್ದು, ಭಕ್ತರ ದಂಡೇ ತುಳು ದೈವಗಳ ಆರಾಧನೆಗೆ ಆಗಮಿಸುತ್ತಿದ್ದಾರೆ. ಸದ್ಯ ತಮಿಳಿನ ಖ್ಯಾತ ನಟ ವಿಶಾಲ್ ಕೂಡ ದೈವ್ಯದ ಮೊರೆ ಹೋಗಿದ್ದಾರೆ. ಮಂಗಳವಾರ ರಾತ್ರಿ ಮಂಗಳೂರಿನ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ತಮಿಳಿನ ಖ್ಯಾತ ನಟ ವಿಶಾಲ್ ನೇಮೋತ್ಸವದಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ರು. ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವಿಶಾಲ್ ಕಣ್ತುಂಬಿಕೊಂಡಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರೋ ಹಿನ್ನೆಲೆ ವಿಶಾಲ್ ನೇಮೋತ್ಸವದಲ್ಲಿ ಭಾಗಿಯಾಗಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಪ್ರಾರ್ಥನೆ ಮಾಡಿಕೊಂಡ್ರು. ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು ಇದಕ್ಕೆ ವಿಶಾಲ್ ಒಪ್ಪಿದ್ದಾರೆ.
ಇನ್ನೂ, ನೇಮೋತ್ಸವದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ವಿಶಾಲ್,ಕಾಂತಾರ ನಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿಯಿತು. ಮೊದಲ ಬಾರಿಗೆ ತುಳುನಾಡಿನ ನೇಮೋತ್ಸವವನ್ನು ನೋಡುತ್ತಿದ್ದೇನೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ರು. ಅಲ್ಲದೆ, ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಭೇಟಿ ನೀಡಿದ್ದೇನೆ ಅಂತ ತಿಳಿಸಿದ್ರು. ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತ್ತಿದೆ ಎಂದು ತಿಳಿಸಿದ್ರು.
ಹರಿಪಾದೆ ಜಾರಂದಾಯ ಅತ್ಯಂತ ಕಾರಣಿಕದ ದೈವ. ನಂಬಿದವರಿಗೆ ಇಂಬು ನೀಡುವ ದೈವ ಹರಿಪಾದೆ ಜಾರಂದಾಯ. ಇಲ್ಲಿನ ನೇಮೋತ್ಸವದ ವೇಳೆ ಜಾರಂದಾಯನ ಪಲ್ಲಕ್ಕಿಗೆ ಅವೇಶ ಬರುತ್ತದೆ. ಸುಮಾರು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನಿಸಿದರು ನಿಯಂತ್ರಣಕ್ಕೆ ಸಿಗುವುದಿಲ್ಲ. ಇಂತಹ ಕಾರಣಿಕ ಹೊಂದಿರು ಶ್ರೀ ಕ್ಷೇತ್ರದ ಬಗ್ಗೆ ತಿಳಿದೇ ವಿಶಾಲ್ ಭೇಟಿ ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಈ ದೈವಸ್ಥಾನದಲ್ಲಿ ತುಲಾಭಾರ ಸೇವೆ ಪ್ರಮುಖ್ಯತೆ ಪಡೆದಿದ್ದು, ಭಕ್ತರು ಸಮಸ್ಯೆ ನಿವಾರಣೆಗೆ ತುಲಾಭಾರ ಸೇವೆ ನೀಡುತ್ತಾರೆ. ಹೀಗಾಗಿ ನಟ ವಿಶಾಲ್ ಕೂಡ ಆರೋಗ್ಯ ಸುಧಾರಿಸಿದ ನಂತರ ತುಲಾಭಾರ ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ. ಒಟ್ಟಿನಲ್ಲಿ ಕಟ್ಟುಮಸ್ತಾಗಿದ್ದ ವಿಶಾಲ್ ಅನಾರೋಗ್ಯದಿಂದ ಸೊರಗಿ ಹೋಗಿದ್ದಾರೆ. ಸದ್ಯ ವಿಶಾಲ್ ತುಳುನಾಡಿನ ದೈವಕ್ಕೆ ಹರಕ್ಕೆ ಹೊತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.