ಕಡಬ: ಸುಬ್ರಹ್ಮಣ್ಯ ಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೊಲೀಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಯುವಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಎಂಬವರು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವವರು.
ಈ ಬಗ್ಗೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ ಸ್ಟಾಲಿಗೆ ಬಂದ ಪೋಲಿಸ್ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ನಾನು ಹೆದರಿ 1000 ನೀಡಿದ್ದೇನೆ. ಈ ಹಣ ಸಾಕಾಗುವುದಿಲ್ಲ. 5000 ನೀಡುವಂತೆ ಪೊಲೀಸ್ ಸಿಬ್ಬಂದಿ ಬೆದರಿಸಿದ್ದು, ಅಷ್ಟು ಹಣ ನೀಡದಿದ್ದಾಗ ನನ್ನನ್ನು ಠಾಣೆಯ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿರುವ ಯುವಕ ಆರೋಪಿಸಿದ್ದಾರೆ.
ಸಂಘಟನೆಯ ಕಾರ್ಯಕರ್ತರು ಜಮಾವಣೆ..:
ವಿಷಯ ತಿಳಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಜಮಾಯಿಸಿದ್ದು, ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಯುವಕನಿಗೆ ನ್ಯಾಯ ನೀಡದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಬಾಡಿಗೆ ನೀಡುವಂತೆ ಹೇಳಿದ್ದಷ್ಟೆ ಹಲ್ಲೆ ನಡೆಸಿಲ್ಲ..!!!
ಕಿಶೋರ್ ಎಂಬವರಿಗೆ ವ್ಯಾಪಾರ ನಡೆಸಲು ಆ ಜಾಗ ನೀಡಿದ್ದು, ಅವರು 19 ವರ್ಷದ ಶಶಿಕಿರಣ್ ಎಂಬ ಯುವಕನಿಗೆ ನೀಡಿದ್ದಾರೆ. ಆತ ಕಲರ್ ಚಾಯ್ಸ್ ಅಂಗಡಿ ಹಾಕಿದ್ದು, ಕಿಶೋರ್ ಎಂಬವರಿಗೆ ಈತ ಬಾಡಿಗೆ ನೀಡದೆ ಇದ್ದು, ಅವರು ಕೇಳಿದಾಗ ಇಲ್ಲ ಹೊರಗಡೆ ಇದ್ದೇನೆ ಎಂದೆಲ್ಲಾ ಹೇಳುತ್ತಾ ಬಂದಿದ್ದಾನೆ. ಅವರು ಬಂದು ಪೊಲೀಸರಿಗೆ ಬಾಡಿಗೆ ನೀಡದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ವಿಚಾರಣೆ ನಡೆಸಲು ಹೋದಾಗ ಅಂಗಡಿಯವರು ಮಾಲೀಕ ಇಲ್ಲ ಎಂದು ಹೇಳಿದ್ದು, ಆದರೇ ಆತ ಪಕ್ಕದಲ್ಲೇ ನಿಂತಿದ್ದ ಆಟೋ ರಿಕ್ಷಾದಲ್ಲಿ ಕುಳಿತುಕೊಂಡಿದ್ದು, ಈ ವೇಳೆ ವಿಚಾರಣೆ ನಡೆಸಿ ಕೇಳಿದಾಗ ವ್ಯಾಪಾರ ಆಗಿಲ್ಲ ಎಂದು ಹೇಳಿದ್ದು, ವಿಚಾರಿಸಿ ಬಾಡಿಗೆ ನೀಡುವಂತೆ ಹೇಳಿ ಬಂದಿದ್ದಾರೆ ಅಷ್ಟೆ ಯಾರೂ ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ..