ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸತತ ಎರಡನೇ ವರ್ಷವೂ ಗೋವಾದಲ್ಲಿ ನಡೆದ ಐರನ್ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಶಿಸ್ತಿಗೆ ಮಾದರಿಯಾಗಿದ್ದಾರೆ.
ಈ ವರ್ಷದ ಐರನ್ಮ್ಯಾನ್ನಲ್ಲಿ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (Annamalai) ಸಹ ಭಾಗವಹಿಸಿದ್ದು ವಿಶೇಷ. ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಾದ – 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡರು.
ಮತ್ತೊಂದೆಡೆ, ಅಣ್ಣಾಮಲೈ ಅವರು ಈ ಓಟವನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಓಟದ ನಂತರ ಮಾತನಾಡಿದ ಸೂರ್ಯ, ’50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳನ್ನು ಆಕರ್ಷಿಸುವ ಐರನ್ಮ್ಯಾನ್ 70.3 ಗೋವಾ (Iron Man 70.3 Goa), ಭಾರತದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅಂತಿಮ ಪರೀಕ್ಷೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸುಧಾರಿಸಲು ನಾನು ಕಠಿಣ ತರಬೇತಿ ಪಡೆದಿದ್ದು, ಈ ಸವಾಲನ್ನು ಪೂರ್ಣಗೊಳಿಸಿರುವುದಕ್ಕೆ ಸಂತೋಷವಾಗಿದೆ’ ಎಂದರು.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ, ‘ನನ್ನ ಆತ್ಮೀಯ ಸಹೋದರ ಅಣ್ಣಾಮಲೈ ಅವರೊಂದಿಗೆ ಭಾಗವಹಿಸಿದ್ದರಿಂದ ನನ್ನ ಎರಡನೇ ಐರನ್ಮ್ಯಾನ್ 70.3ಗೆ ಒಂದು ಬಲವಾದ ಮುಕ್ತಾಯ ಸಿಕ್ಕಿದೆ. ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಕರೆ ಯುವಕರಲ್ಲಿ ಆರೋಗ್ಯ, ಶಿಸ್ತು ಮತ್ತು ದೃಢ ಸಂಕಲ್ಪದ ಅಲೆಯನ್ನು ಪ್ರೇರೇಪಿಸುತ್ತಿದೆ. ಈ ಪ್ರಯಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಉಪಕ್ರಮವು ಸ್ಫೂರ್ತಿಯಾಗಿದೆ. ಇದು ನನ್ನ ವೈಯಕ್ತಿಕ ಫಿಟ್ನೆಸ್ ಗುರಿಗಳ ಬಗ್ಗೆ ಆಳವಾಗಿ ಯೋಚಿಸಲು ಪ್ರೋತ್ಸಾಹಿಸಿತು’ ಎಂದು ತಿಳಿಸಿದರು.




























