ಪುತ್ತೂರು: ಸ್ವಸಹಾಯ ಸಂಘದ ಸದಸ್ಯರ ಸಾಲ ಮರುಪಾವತಿ ಹಣವನ್ನು ವೈಯಕ್ತಿಕ ಅಗತ್ಯಕ್ಕೆ ಉಪಯೋಗಿಸಿ ದುರುಪಯೋಗ ಮಾಡಿದ ವಿರುದ್ದದ ಚೆಕ್ ಅಮಾನ್ಯ ಪ್ರಕರಣದ ಆರೋಪಿ ಬಡಗನ್ನೂರು ಕೆಮನಡ್ಕ ನಿವಾಸಿ, ದ.ಕ.ಜಿಲ್ಲಾ ಸಹಜೀವನ ಒಕ್ಕೂಟದ ಕಾರ್ಯಕರ್ತೆಯಾಗಿದ್ದ ಮಾರ್ಸೆಲಿನ್ ಡಿ.ಸೋಜ ಅವರಿಗೆ 16,10,100 ರೂ.ದಂಡ ವಿಧಿಸಿ ಮಂಗಳೂರು ಜೆಎಂಎಫ್ಸಿ ಕೋರ್ಟ್ ಆದೇಶಿಸಿದೆ.
ದ.ಕ.ಜಿಲ್ಲಾ ಸಹಜೀವನ ಒಕ್ಕೂಟ ಸಿ.ಒ.ಡಿ.ಪಿ. ಸಂಸ್ಥೆಯ ಪುತ್ತೂರು ತಾಲೂಕಿನ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಮಾರ್ಸೆಲಿನ್ ಡಿಸೋಜಾ ಅವರು ಪುತ್ತೂರು ಆದರ್ಶ ಒಕ್ಕೂಟದ ಸ್ವಸಹಾಯ ಸಂಘಗಳ ಸದಸ್ಯರು ಸಾಲ ಮರುಪಾವತಿ ಮಾಡಿದ ಹಣವನ್ನು ವೈಯಕ್ತಿಕ ಅಗತ್ಯಕ್ಕೆ ಉಪಯೋಗಿಸಿ ದುರುಪಯೋಗ ಮಾಡಿದ್ದರು.
ಬಳಿಕ ಇದಕ್ಕೆ ಅವರು ನೀಡಿದ್ದ ಚೆಕ್ ಅಮಾನ್ಯವಾಗಿತ್ತು. ಈ ಬಗ್ಗೆ ಒಕ್ಕೂಟದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಚೆಕ್ ಅಮಾನ್ಯ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್ಸಿ ಕೋರ್ಟ್ ಆರೋಪಿಯ ವಿರುದ್ಧ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್ 1881ರ ಕಲಂ 138ರಡಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ 16,10,100 ರೂ.ದಂಡ ವಿಧಿಸಿ ಮೇ 14ರಂದು ತೀರ್ಪು ನೀಡಿದೆ.
ಪರಿಹಾರ ಧನ ಪಾವತಿಸಲು ವಿಫಲವಾದಲ್ಲಿ ಆರೋಪಿಗೆ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಕಾರಾಗೃಹ ಶಿಕ್ಷೆ ಅನುಭವಿಸಿದರೂ ಪರಿಹಾರಧನ ಪಾವತಿಸುವ ಜವಾಬ್ದಾರಿಯಿಂದ ಆರೋಪಿಗೆ ವಿನಾಯಿತಿ ಇರುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರ ಪರವಾಗಿ ಅಡ್ವಕೇಟ್ ಸೀಮಾ ರೊಡ್ರಿಗಸ್ ಅವರು ವಾದ ಮಂಡಿಸಿದ್ದರು.



























